ಚೆನ್ನೈ: ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಪದಚ್ಯುತಿಗೆ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಯತ್ನಿಸುತ್ತಿದ್ದಾರೆ ಎಂದು ಅಮ್ಮ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ನಾಯಕ ಟಿ.ಟಿ.ವಿ ದಿನಕರನ್ ಶುಕ್ರವಾರ ನೇರವಾಗಿ ಆರೋಪ ಮಾಡಿದ್ದಾರೆ.
ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನೆರವು ಕೋರಿ ಪನ್ನೀರ್ ಸೆಲ್ವಂ ಕಳೆದ ವರ್ಷ ಜುಲೈನಲ್ಲಿ ತಮ್ಮನ್ನು ಭೇಟಿಯಾಗಿದ್ದರು. ಮತ್ತೆ ಈಗ ಅದೇ ಉದ್ದೇಶದಿಂದ ಇದೇ ಸೆಪ್ಟೆಂಬರ್ ಅಂತ್ಯದಲ್ಲಿ ಸ್ನೇಹಿತರೊಬ್ಬರ ಮೂಲಕ ತಮ್ಮನ್ನು ಭೇಟಿಯಾಗಲು ಬಯಸಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ.
‘ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಪನ್ನೀರ್ ನನಗೆ ಉನ್ನತ ಸ್ಥಾನಮಾನದ ಆಮಿಷವನ್ನೂ ಒಡ್ಡಿದ್ದರು. ಆದರೆ, ನಾನು ಮಾತುಕತೆಗೆ ಒಪ್ಪಿಗೆ ನೀಡಲಿಲ್ಲ’ ಎಂದು ದಿನಕರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.