ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ. ಶೋಷಿತ ಮತ್ತು ಅವಕಾಶ ವಂಚಿತರ ಕಲ್ಯಾಣಕ್ಕಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ಅವರನ್ನು ಸ್ಮರಿಸಿದ್ದಾರೆ. ಈ ಕುರಿತಂತೆ ಅವರು ಎಕ್ಸ್ ಖಾತೆಯಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂವಿಧಾನ ಶಿಲ್ಪಿ ಮಾತ್ರವಲ್ಲದೆ, ಅವರು ಸಾಮಾಜಿಕ ಸೌಹಾರ್ದತೆಯ ಅಮರ ಹೋರಾಟಗಾರರಾಗಿದ್ದರು ಎಂದ ಮೋದಿ, ಹಿಂದುಳಿದವರ ಪರವಾಗಿ ಹೋರಾಡುವ ಮೂಲಕ ದಲಿತ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ಭಾರತದ ರಾಜಕೀಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು ಎಂದು ಕೊಂಡಾಡಿದ್ದಾರೆ.
1956ರಲ್ಲಿ ಅವರ ನಿಧನದ ಬಳಿಕವೂ ದಲಿತರು, ದುರ್ಬಲರ ಶಿಕ್ಷಣ ಮತ್ತು ಸಬಲೀಕರಣದ ಕುರಿತಾದ ಅವರ ಆಲೋಚನೆಗಳು ವರ್ಷದಿಂದ ವರ್ಷಕ್ಕೆ ಮನ್ನಣೆ ಪಡೆದು ಬೆಳೆದಿವೆ ಎಂದು ಮೋದಿ ಹೇಳಿದ್ದಾರೆ.