ಲಖನೌ: ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಮೃತಪಟ್ಟಿರುವುದು ಹೃದಯಸ್ತಂಭನದಿಂದಲೇ ಎಂಬುದು ಶವಪರೀಕ್ಷೆ ವರದಿಯಿಂದ ಖಚಿತವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ಮಾಜಿ ಶಾಸಕ ಅನ್ಸಾರಿ, ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಮೃತಪಟ್ಟಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಬಾಂಡಾ ಜಿಲ್ಲಾ ಕಾರಾಗೃಹದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಜೈಲಿನಲ್ಲಿ, ಅನ್ಸಾರಿಗೆ ನಿಧಾನವಾಗಿ ಪರಿಣಾಮ ಬೀರುವ ವಿಷ ಉಣಿಸಲಾಗಿದೆ. ಹೀಗಾಗಿಯೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು.
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಆಸ್ಪತ್ರೆಯ ವೈದ್ಯರೊಬ್ಬರು 'ಮುಖ್ತಾರ್ ಅನ್ಸಾರಿ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿದೆ' ಎಂದು ತಿಳಿಸಿದ್ದಾರೆ.