ಲಖನೌ: ಜೈಲಿನಲ್ಲಿದ್ದ ಮಾಜಿ ಶಾಸಕ, ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಉತ್ತರಪ್ರದೇಶ ಬಾಂಡಾ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ತನಿಖೆಗೆ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಗರಿಮ್ ಸಿಂಗ್ ಅವರನ್ನು ನೇಮಿಸಿ ಬಾಂಡಾ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಭಗವಾನ್ದಾಸ್ ಗುಪ್ತಾ ಆದೇಶಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಪ್ರಜ್ಞಾಹೀನರಾಗಿದ್ದ ಅನ್ಸಾರಿಯನ್ನು ಬಾಂಡಾ ಜಿಲ್ಲಾ ಕಾರಾಗೃಹದಿಂದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ತಮ್ಮ ತಂದೆ ಮುಖ್ತಾರ್ ಅನ್ಸಾರಿ ಅವರಿಗೆ ಜೈಲಿನಲ್ಲಿ ವಿಷ ನೀಡಲಾಗುತ್ತಿತ್ತು ಎಂದು ಉಮರ್ ಅನ್ಸಾರಿ ಆರೋಪಿಸಿದ್ದಾರೆ.
ಮಾಊ ಸದರ್ ವಿಧಾನಸಭಾ ಕ್ಷೇತ್ರವನ್ನು ಅನ್ಸಾರಿ ಐದು ಬಾರಿ ಪ್ರತಿನಿಧಿಸಿದ್ದರು. ಇವರ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಎಂಟು ಪ್ರಕರಣಗಳಲ್ಲಿ ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಶಿಕ್ಷೆ ವಿಧಿಸಿದ್ದರಿಂದ 2022ರ ಸೆಪ್ಟೆಂಬರ್ನಿಂದ ಅನ್ಸಾರಿ ಬಾಂಡಾ ಜೈಲಿನಲ್ಲಿದ್ದರು.