ನವದೆಹಲಿ: ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂಢಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ ಕುರಿತು ದಾಖಲಾಗಿರುವ ದೂರುಗಳ ಬಗ್ಗೆ ಹಕ್ಕುಬಾದ್ಯತಾ ಸಮಿತಿಯು ಅ.10ರಂದು ವಿಚಾರಣೆ ಆರಂಭಿಸಲಿದೆ.
ಮುಂದಿನ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಬಿಧೂಢಿ ಅವರಿಗೆ ಸಮಿತಿ ಸಮನ್ಸ್ ಜಾರಿ ಮಾಡಿದೆ.
ಸೆ.19ರಂದು ನಡೆದ ವಿಶೇಷ ಅಧಿವೇಶನ ಸಂದರ್ಭದಲ್ಲಿ ‘ಚಂದ್ರಯಾನ– 3 ಯೋಜನೆ’ ಕುರಿತ ಚರ್ಚೆ ವೇಳೆ ಬಿಧೂಢಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬಿಧೂಢಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಕೋಮುವಾದಿ ಸ್ವರೂಪದ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಿದ್ದರು.
ಬಿಧೂಢಿ ಹೇಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದ ಒಳಗೇ ವಿಷಾದ ವ್ಯಕ್ತಪಡಿಸಿದ್ದರು.
ಬಿಜೆಪಿ ಸಹ ಬಿಢೂಢಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. ಆದರೆ ಇದೇ ಸಂದರ್ಭದಲ್ಲಿ ಅವರಿಗೆ ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ಚುನಾವಣೆಯ ಜವಾಬ್ದಾರಿಯನ್ನೂ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.