ಕೋಲ್ಕತ್ತ: ಕಾರ್ಪೊರೇಟ್ ಕಂಪನಿಗಳು ಕಪ್ಪುಹಣ ಹೊಂದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ನೀಡಿರುವ ಹೇಳಿಕೆಯ ಕುರಿತು ತನಿಖೆಗೆ ಆದೇಶಿಸುವಂತೆ ಟಿಎಂಸಿ ಪರ ಇರುವ ಶಿಕ್ಷಣ ತಜ್ಞರ ವೇದಿಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿದೆ.
ತೆಲಂಗಾಣದ ಕರೀಂ ನಗರದಲ್ಲಿ ಈಚೆಗೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ ಅವರು, ದೇಶದ ಎರಡು ದೊಡ್ಡ ಕಾರ್ಪೊರೇಟ್ ಕಂಪನಿಗಳು ಕಪ್ಪುಹಣದ ಸಂಗ್ರಹಣೆ, ಬಳಕೆ ಮತ್ತು ವಿತರಣೆಯಲ್ಲಿ ಶಾಮೀಲಾಗಿವೆ ಎಂದು ಆರೋಪಿಸಿದ್ದರು.
ಕಪ್ಪು ಹಣದ ಬಳಕೆಯು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಬೆದರಿಕೆಯೊಡ್ಡುತ್ತಿದೆ ಎಂದು ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳು ಮತ್ತು ಪ್ರಾಧ್ಯಾಪಕರನ್ನೊಳಗೊಂಡಿರುವ ವೇದಿಕೆಯು ಹೇಳಿಕೆಯಲ್ಲಿ ತಿಳಿಸಿದೆ.
ಪ್ರೊ. ಓಂಪ್ರಕಾಶ್ ಮಿಶ್ರಾ, ರಾಜ್ಯದ ಮಾಜಿ ಸಚಿವ ಪೂರ್ಣೇಂದು ಬಸು ಮತ್ತು ಸಂಶೋಧಕ ಪ್ರೊ. ಅಖಿಲ್ ಸ್ವಾಮಿ ಮತ್ತಿತರರು ಹೇಳಿಕೆಗೆ ಸಹಿ ಹಾಕಿದ್ದಾರೆ.