ನವದೆಹಲಿ: ಸರ್ವಶಕ್ತಿಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಜನರಿಗೆ ಕರೆ ನೀಡಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ ಸಂದೇಶ ನೀಡಿರುವ ಅವರು, ‘ಈ ಐತಿಹಾಸಿಕ ದಿನದಂದು ಲಕ್ಷಾಂತರ ಮಂದಿ ಕಾಂಗ್ರೆಸ್ ಕಾಯರ್ಕರ್ತರನ್ನು ಬಡಿದು ಜೈಲಿಗಟ್ಟಿದಾಗ, ಅರುಣಾ ಅಸಫ್ ಅಲಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದ್ದರು. ಅವರ ಧೈರ್ಯವು ಸ್ವಾತಂತ್ರ್ಯಾನ್ವೇಷಣೆಯ ಸಂಕೇತವಾಗಿದೆ’ ಎಂದಿದ್ದಾರೆ.
‘ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದಿರುವ ಕ್ವಿಟ್ ಇಂಡಿಯಾ ಚಳವಳಿಯನ್ನು ಸ್ಮರಿಸುವಾಗ ನಾವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಮಂದಿಯನ್ನು ಮತ್ತು ಮಹಿಳೆಯರನ್ನು ಮರೆಯಬಾರದು’ ಎಂದೂ ಹೇಳಿದ್ದಾರೆ.
‘ಕಾಂಗ್ರೆಸ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಯುತ್ತಿದ್ದಾಗ, ಆರ್ಎಸ್ಎಸ್ ಅದನ್ನು ಬಹಿಷ್ಕರಿಸಿದ್ದು ಮಾತ್ರವಲ್ಲ ಬ್ರಿಟಿಷರಿಗೆ ಸಕ್ರಿಯವಾಗಿ ಸಹಾಯ ಮಾಡಿತ್ತು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘80 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರು ಈ ದಿನದಂದು ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದಾಗ ಆರ್ಎಸ್ಎಸ್ ಏನು ಮಾಡುತ್ತಿತ್ತು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.