ರಾಮಗಢ: ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ನಾಲ್ಕನೇ ದಿನದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಮಗಢ ಕಲ್ಲಿದ್ದಲು ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.
‘ನಿತ್ಯ 200 ಕೆ.ಜಿ ಕಲ್ಲಿದ್ದಲನ್ನು ಸೈಕಲ್ ಮೇಲೆ ಹೊತ್ತು 30ರಿಂದ 40 ಕಿ.ಮೀ ಸಂಚರಿಸುವ ಈ ಯುವಕರ ಆದಾಯ ಹೆಸರಿಗಷ್ಟೇ. ಅವರೊಂದಿಗೆ ನಡೆಯದೆ, ಅವರ ಭಾರವನ್ನು ಅನುಭವಿಸದೆ ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಯುವ ಕಾರ್ಮಿಕರ ಬದುಕು ನಿತ್ರಾಣವಾದರೆ ಭಾರತ ನಿರ್ಮಾಣದ ಚಕ್ರವೂ ನಿಲ್ಲುತ್ತದೆ’ ಎಂದು ರಾಹುಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ‘ಜಾರ್ಖಂಡ್ ಕ್ರಾಂತಿ’ಯ ಮುಂದಾಳತ್ವ ವಹಿಸಿ ವೀರ ಮರಣ ಹೊಂದಿದ ಶೇಖ್ ಭಿಖಾರಿ ಮತ್ತು ಟಿಕೈತ್ ಉಮ್ರಾವ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು.
ರಾಂಚಿಯ ಶಾಹೀದ್ ಮೈದಾನದಲ್ಲಿ ಮಧ್ಯಾಹ್ನ ಸಾರ್ವಜನಿಕರನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.