ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಶೇಷ ಉಪನ್ಯಾಸ ನೀಡಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳುತ್ತಿರುವುದರಿಂದ ಮತ್ತು ದೆಹಲಿಯಲ್ಲಿ ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತಿರುವುದರಿಂದ ಫೆಬ್ರುವರಿ 26ರಿಂದ ಮಾರ್ಚ್ 1ರವರೆಗೆ ಐದು ದಿನ ಭಾರತ್ ಜೋಡೊ ನ್ಯಾಯ ಯಾತ್ರೆಗೆ ವಿರಾಮ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಬುಧವಾರ ತಿಳಿಸಿದೆ.
ಫೆ.22 ಮತ್ತು 23ರಂದು ಸಹ ಯಾತ್ರೆಗೆ ವಿರಾಮ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ತಿಳಿಸಿದರು.
ಯಾತ್ರೆಯು ಫೆ.24ರಂದು ಉತ್ತರಪ್ರದೇಶದ ಮೊರಾದಾಬಾದ್ನಿಂದ ಮತ್ತೆ ಆರಂಭವಾಗಲಿದೆ. ನಂತರ ಸಂಬಲ್, ಅಲೀಗಢ, ಹಾಥ್ರಸ್ ಮತ್ತು ಆಗ್ರ ಜಿಲ್ಲೆಗಳ ಮೂಲಕ ರಾಜಸ್ಥಾನ ತಲುಪಲಿದೆ. ಬಳಿಕ ಫೆ.26ರಿಂದ ಮಾರ್ಚ್ 1ರವರೆಗೆ ವಿರಾಮ ಇರಲಿದೆ. ನಂತರ ಮಾರ್ಚ್ 2ರಿಂದ ರಾಜಸ್ಥಾನದ ಧೋಲ್ಪುರದಿಂದ ಯಾತ್ರೆಯು ಮತ್ರೆ ಆರಂಭವಾಗಲಿದೆ ಎಂದು ಹೇಳಿದರು.
ಉಜ್ಯಯಿನಿಯಲ್ಲಿ ರ್ಯಾಲಿ ನಡೆಸುವ ವೇಳೆ ಮಹಾಕಾಳೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದೂ ಅವರು ತಿಳಿಸಿದರು.