ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ಫೋನ್ ವಿತರಿಸುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಿದರು.
ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಸ್ಮಾರ್ಟ್ಫೋನ್ ಯೋಜನೆಯ ಫಲಾನುಭವಿಗಳಿಗೆ ಮುಖ್ಯಮಂತ್ರಿ ಮೊಬೈಲ್ಗಳನ್ನು ವಿತರಿಸಿದರು.
ಈ ಯೋಜನೆ ಅನ್ವಯ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್ಫೋನ್ಗಳನ್ನು ಕುಟುಂಬದ ಮುಖ್ಯಸ್ಥೆಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಜ್ಞಾನವೇ ಶಕ್ತಿ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ಫೋನ್ಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆಯು ಮಹಿಳೆಯರನ್ನು ಸಬಲೀಕರಣಗೊಳಿಸಲಿದೆ’ ಎಂದು ಗೆಹಲೋತ್ ಹೇಳಿದರು.
ಯೋಜನೆಯ ಮೊದಲ ಹಂತದಲ್ಲಿ ವಿಧವೆಯರು, ಪಿಂಚಣಿ ಪಡೆಯುವ ಒಂಟಿ ಮಹಿಳೆಯರು, ವಿದ್ಯಾರ್ಥಿನಿಯನ್ನು ಹೊಂದಿರುವ ಕುಟುಂಬಗಳನ್ನು ಯೋಜನೆಯ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವಿತರಣಾ ಶಿಬಿರದಲ್ಲಿ ಫಲಾನುಭವಿಗಳು ತಮಗೆ ಬೇಕಾದ ಬ್ರ್ಯಾಂಡ್ನ ಸ್ಮಾರ್ಟ್ಫೋನ್ ಆಯ್ಕೆಗೆ ಅವಕಾಶವಿದೆ. ನೇರ ಸೌಲಭ್ಯ ವರ್ಗಾವಣೆ(ಡಿಬಿಟಿ) ವಿಧಾನದಡಿ ಫಲಾನುಭವಿಗಳ ಖಾತೆಗೆ ₹6,800 ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಯೋಜನೆಯ ಆರಂಭಿಕ ಹಂತದಲ್ಲಿ 40 ಲಕ್ಷ ಫಲಾನುಭವಿಗಳು ಸ್ಮಾರ್ಟ್ಫೋನ್ ಪಡೆಯಲಿದ್ದಾರೆ ಎಂದು ತಿಳಿಸಿದರು.