ಭುವನೇಶ್ವರ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭಾ ಚುನಾವಣೆಗೆ ಒಡಿಶಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇಂದು (ಗುರುವಾರ) ನಾಮಪತ್ರ ಸಲ್ಲಿಸಿದ್ದಾರೆ .
ವೈಷ್ಣವ್ ಅವರು ಒಡಿಶಾ ವಿಧಾನಸಭೆ ಆವರಣದಲ್ಲಿ ರಾಜ್ಯಸಭಾ ಚುನಾವಣಾಧಿಕಾರಿ ಅಬನಿಕಾಂತ ಪಟ್ನಾಯಕ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ವೈಷ್ಣವ್ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸುವುದಾಗಿ ಆಡಳಿತಾರೂಢ ಬಿಜೆಡಿ ಬುಧವಾರ (ಫೆ.14) ಘೋಷಿಸಿದೆ.
2019ರ ರಾಜ್ಯಸಭಾ ಚುನಾವಣೆಯಲ್ಲೂ ವೈಷ್ಣವ್ ಅವರಿಗೆ ಬಿಜೆಡಿ ಬೆಂಬಲ ನೀಡಿತ್ತು.
ವೈಷ್ಣವ್ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಹಾಗೂ ಪಕ್ಷದ ಶಾಸಕರು ಜತೆಗಿದ್ದರು.
ರಾಜ್ಯಸಭಾ ಚುನಾವಣೆಗೆ ಫೆಬ್ರುವರಿ 27ರಂದು ಬೆಳಿಗ್ಗೆ 9 ರಿಂದ ಸಂಜೆ 4ವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಅಧಿಸೂಚನೆಯಲ್ಲಿ ತಿಳಿಸಿದ್ದರು.