ನವದೆಹಲಿ:ರಾಜ್ಯಸಭೆ ಉಪ ಸಭಾಪತಿಯಾಗಿ ಎನ್ಡಿಎ ಅಭ್ಯರ್ಥಿ, ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್ ಅವರು ಗುರುವಾರ ಆಯ್ಕೆಯಾದರು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿಒಟ್ಟು 230 ಮತಗಳು ಚಲಾವಣೆಯಾದವು. ಈ ಮತಗಳ ಪೈಕಿ ಹರಿವಂಶ ನಾರಾಯಣ ಅವರು 125 ಮತ ಪಡೆದು ಗೆಲುವು ಸಾಧಿಸಿದರು. ವಿರುದ್ಧವಾಗಿ(ಬಿ.ಕೆ.ಹರಿಪ್ರಸಾಸ್ ಪರ) 105 ಮತ ಬಿದ್ದವು. ಇಬ್ಬರು ಸದಸ್ಯರು ಗೈರಾಗಿದ್ದರು.
ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಯ್ಕೆಯನ್ನು ಪ್ರಕಟಿಸಿದರು.
ಆರಂಭದಲ್ಲಿ ಎಂ. ವೆಂಕಯ್ಯ ನಾಯ್ಡು ಅವರು ಸದನದಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮತಕ್ಕೆ ಹಾಕಿದರು. ಸದಸ್ಯರು ತಾವು ಕುಳಿತ ಆಸನದ ಮುಂದಿದ್ದ ಗುಂಡಿಗಳನ್ನು ಒತ್ತುವ ಮೂಲಕ ಮತ ಚಲಾಯಿಸಿದರು.
ಒಟ್ಟು 202 ಮತಗಳು ಚಲಾವಣೆಯಾದವು.ಡಿಜಿಟಲ್ ಡಿಸ್ಪ್ಲೆಮೂಲಕ ಬಂದ ಮತಗಳಿಗೂ ಹಾಜರಿದ್ದ ಸದಸ್ಯರ ಸಂಖ್ಯೆಗೆ ತಾಳೆಯಾಗದ ಕಾರಣ ಸಭಾಧ್ಯಕ್ಷರು ಮತ್ತೊಮ್ಮೊ ಮತಕ್ಕೆ ಹಾಕಿ, ಗುಂಡಿ ಒತ್ತುವಂತೆ ಸೂಚಿಸಿದರು. ಎರಡನೇ ಬಾರಿಗೆ222 ಮತಗಳು ಚಲಾವಣೆಯಾದವು. ಈ ವೇಳೆಯೂ ನಿಖರವಾದ ಸಂಖ್ಯೆ ಲಭ್ಯವಾಗಲಿಲ್ಲ. ಹಾಜರಿದ್ದ ಮತ್ತು ಚಲಾವಣೆಯಾದ ಮತಗಳ ಮಧ್ಯೆ ವ್ಯತ್ಯಾಸವಿತ್ತು. ಹೀಗಾಗಿ, ಸಭಾಧ್ಯಕ್ಷರು ಮತ ಚಲಾವಣೆಯಾಗದವರು ಚೀಟಿಯಲ್ಲಿ ಬರೆದು ತಿಳಿಸುವಂತೆ ಸೂಚಿಸಿದರು. ಎಲ್ಲವನ್ನೂ ಲೆಕ್ಕಹಾಕಿ ಬಳಿಕವಷ್ಟೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸದಸ್ಯರು ಚೀಟಿಯಲ್ಲಿ ಬರೆದು ತಿಳಿಸಿದ ಬಳಿಕ, ಎಲ್ಲಾ ಮತಗಳನ್ನು ಒಟ್ಟು ಗೂಡಿಸಿದ ಬಳಿಕ ಒಟ್ಟು 230 ಮತಗಳು ಚಲಾವಣೆಯಾಗಿವೆ.ಹರಿವಂಶ ನಾರಾಯಣ ಸಿಂಗ್ ಅವರ ಪರ 125 ಮತಗಳು ಬಂದಿವೆ, ವಿರುದ್ಧವಾಗಿ 105 ಮತಗಳು ಬಂದಿವೆ. ಹರಿವಂಶ ನಾರಾಯಣ ಸಿಂಗ್ ಅವರು ಉಪ ಸಭಾಪತಿಯಾಗಿಆಯ್ಕೆಯಾಗಿದ್ದಾರೆಎಂದು ಸಭಾಧ್ಯಕ್ಷರಾದ ಎಂ.ವೆಂಕಯ್ಯ ನಾಯ್ಡು ಅವರುಘೋಷಣೆ ಮಾಡಿದರು.
ಉಪ ಸಭಾಪತಿ ಸ್ಥಾನಕ್ಕೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ತೀವ್ರ ಹಣಾಹಣಿಗೆ ಕಾರಣವಾಗಿತ್ತು.
Motions and voting for election of Deputy Chairman: https://t.co/s9A9POMj36 via @YouTube
— Rajya Sabha TV (@rajyasabhatv) August 9, 2018
ಕುರಿಯನ್ ಅವರ ನಿವೃತ್ತಿಯಿಂದ ತೆರವಾಗಿರುವ ಸ್ಥಾನಕ್ಕೆ ಇಂದು ಬೆಳಿಗ್ಗೆ 11ಕ್ಕೆ ಚುನಾವಣೆ ನಿಗದಿಯಾಗಿತ್ತು. ಎನ್ಡಿಎ ಅಭ್ಯರ್ಥಿಯಾಗಿ ಹರಿವಂಶ ನಾರಾಯಣ ಸಿಂಗ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ನಿಂದ ಕನ್ನಡಿಗ ಬಿ.ಕೆ. ಹರಿಪ್ರಸಾದ್ ಕಣಕ್ಕಿಳಿದಿದ್ದರು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದ್ದು, ಉಪಸಭಾಪತಿ ಆಯ್ಕೆಗೆ ಕನಿಷ್ಠ 123 ಸದಸ್ಯರ ಬೆಂಬಲದ ಅಗತ್ಯವಿತ್ತು. ಆಡಳಿತಾರೂಢ ಎನ್ಡಿಎ ಅಥವಾ ಕಾಂಗ್ರೆಸ್ ಬಳಿ ಅಗತ್ಯ ಸಂಖ್ಯೆಯ ಸದಸ್ಯರು ಇಲ್ಲದ್ದರಿಂದ, ಚುನಾವಣೆಯ ಕಣ ತೀವ್ರ ಕುತೂಹಲಕಾರಿಯಾಗಿತ್ತು. ತಟಸ್ಥ ಪಕ್ಷಗಳೇ ನಿರ್ಣಾಯಕ ಪಾತ್ರ ವಹಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.