ಕೋಲ್ಕತ್ತ: ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
'ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪೂಜ್ಯನೀಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ರಾತ್ರಿ 8.14ಕ್ಕೆ ಮಹಾಸಮಾಧಿ ಸೇರಿದರು' ಎಂದು ರಾಮಕೃಷ್ಣ ಮಿಷನ್ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.
ಸ್ಮರಣಾನಂದರು 2017ರಲ್ಲಿ ರಾಮಕೃಷ್ಣ ಮಿಷನ್ನ 16ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಕ್ಸ್/ಟ್ವಿಟರ್ ಮೂಲಕ ಸಂತಾಪ ಸೂಚಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಸ್ಮರಣಾನಂದರು ಭಾರತೀಯ ಆಧ್ಯಾತ್ಮಿಕತೆಯೆ ದಾರಿದೀಪವಾಗಿದ್ದರು ಎಂದು ಮರ್ಮು ಸ್ಮರಿಸಿದ್ದಾರೆ.
ಮೋದಿ ಅವರು, 'ತಮ್ಮ ಜೀವನವನ್ನೇ ಆಧ್ಯಾತ್ಮಿಕತೆ ಮತ್ತು ಸೇವೆಗೆ ಮುಡಿಪಾಗಿಟ್ಟಿದ್ದ ಸ್ಮರಣಾನಂದರು ಅಸಂಖ್ಯಾತ ಹೃದಯಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ಬದುಕು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಯಾಗಲಿದೆ' ಎಂದು ಟ್ವೀಟ್ ಮಾಡಿದ್ದಾರೆ.
'ಹಲವು ವರ್ಷಗಳಿಂದ ನಾನು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ. 2020ರಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದಾಗ, ಅವರೊಂದಿಗೆ ಸಂವಾದ ನಡೆಸಿದ್ದೆ' ಎಂದು ಸ್ಮರಿಸಿದ್ದಾರೆ. 'ಕೆಲವು ವಾರಗಳ ಹಿಂದಷ್ಟೇ ಕೋಲ್ಕತ್ತದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ' ಎಂದೂ ತಿಳಿಸಿದ್ದಾರೆ.
ಸ್ಮರಣಾನಂದರ ನಿಧನದಿಂದ ತುಂಬಾ ದುಃಖವಾಗಿದೆ ಎಂದಿರುವ ಮಮತಾ ಬ್ಯಾನರ್ಜಿ, ಈ ಮಹಾನ್ ಸನ್ಯಾಸಿ ತನ್ನ ಜೀವಿತಾವಧಿಯಲ್ಲಿ ಜಗತ್ತಿಗೆ ಆಧ್ಯಾತ್ಮಿಕ ನಾಯಕತ್ವ ನೀಡಿದ್ದಾರೆ ಎಂದು ಹೇಳಿದ್ದಾರೆ.
ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಸ್ಮರಣಾನಂದರನ್ನು ಜನವರಿ 29 ರಂದು ಕೋಲ್ಕತ್ತದಲ್ಲಿರುವ ಮಿಷನ್ನ ಸೇವಾ ಪ್ರತಿಷ್ಠಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉಸಿರಾಟದ ಸಮಸ್ಯೆ ತೀವ್ರಗೊಂಡ ಕಾರಣ, ಮಾರ್ಚ್ 3 ರಿಂದ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
Srimat Swami Smaranananda ji Maharaj, the revered President of Ramakrishna Math and Ramakrishna Mission dedicated his life to spirituality and service. He left an indelible mark on countless hearts and minds. His compassion and wisdom will continue to inspire generations.
— Narendra Modi (@narendramodi) March 26, 2024
I had… pic.twitter.com/lK1mYKbKQt
Deeply saddened at the news of the demise tonight of Srimat Swami Smarananandaji Maharaj, the Revered President of the Ramakrishna Math and Mission. This great monk during his lifetime has given spiritual leadership to the world order of the Ramakrishnaites and remains the source…
— Mamata Banerjee (@MamataOfficial) March 26, 2024
Srimat Swami Smaranananda Ji was one of the leading lights of Indian spiritualism who headed Ramakrishna Math and Ramakrishna Mission. Through these organisations, he promoted spirituality and social well-being. In his passing, we may have lost his earthly presence but his life…
— President of India (@rashtrapatibhvn) March 26, 2024
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.