ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಬ್ರಿಜ್ ಭೂಷಣ್ ಸಿಂಗ್ ಪ್ರತಿನಿಧಿಸುತ್ತಿರುವ ಕೈಸರ್ಗಂಜ್ ಕ್ಷೇತ್ರದಿಂದ, ಅವರ ಪುತ್ರ ಕರಣ್ ಭೂಷಣ್ ಸಿಂಗ್ಗೆ ಟಿಕೆಟ್ ನೀಡುವ ಮೂಲಕ ನುಣುಚಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.
ಆರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ವಿರುದ್ಧ ಆರೋಪಗಳನ್ನು ನಿಗದಿ ಮಾಡುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ ಎಂದು ಅವರು ಹೇಳಿದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಡಬ್ಲ್ಯುಎಫ್ಐ ಮುಖ್ಯಸ್ಥ ಸ್ಥಾನವನ್ನು ಭೂಷಣ್ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ, ಭಯೋತ್ಪಾದನೆ, ಕೊಲೆ ಪ್ರಕರಣದಲ್ಲೂ ಅವರು ಆರೋಪಿಯಾಗಿದ್ದಾರೆ ಎಂದು ರಮೇಶ್ ತಿಳಿಸಿದರು.
‘ಬ್ರಿಜ್ ಭೂಷಣ್ ಅವರನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಅವರ ಪುತ್ರನಿಗೆ ಲೋಕಸಭೆ ಟಿಕೆಟ್ ನೀಡುವ ಮೂಲಕ ಭೂಷಣ್ ಅವರ ಕಾರ್ಯವನ್ನು ಬಿಜೆಪಿ ಪುರಸ್ಕರಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಇಡೀ ಬಿಜೆಪಿ ಭೂಷಣ್ ಅವರನ್ನು ಬೆಂಬಲಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ‘ಮೋದಿ ಕಾ ಪರಿವಾರ’ನಲ್ಲಿ ನಾರಿ ಶಕ್ತಿ ಕೇವಲ ಘೋಷಣೆಯಾಗಿದೆ’ ಎಂದು ಅವರು ಆರೋಪಿಸಿದರು.
ಪ್ರಧಾನಿ ಮೋದಿ ಅವರಿಗೆ ನಾರಿ ಶಕ್ತಿಯಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆ, ನಂಬಿಕೆ ಇದ್ದರೆ, ಪ್ರಕರಣದ ತೀರ್ಪು ಬರುವವರೆಗೆ ಭೂಷಣ್ ಅವರನ್ನು ತಕ್ಷಣವೇ ಬಿಜೆಪಿಯಿಂದ ಅಮಾನತುಗೊಳಿಸುತ್ತಾರೆ ಎಂದು ಹೇಳಿದರು.