ಖನ್ನಾ (ಪಂಜಾಬ್): ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅವರು ಸಿಖ್ ಗಲಭೆಯ ಬಗ್ಗೆ ನೀಡಿದ ಹೇಳಿಕೆಗೆ ಅವರಿಗೆ ನಾಚಿಕೆಯಾಗಬೇಕು, ಅವರು ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಫತೇಗಡ ಸಾಹಿಬ್ ಮೀಸಲು ಕ್ಷೇತ್ರದ ಅಭ್ಯರ್ಥಿ ಅಮರ್ ಸಿಂಗ್ ಪರವಾಗಿ ರಾಹುಲ್ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.
‘1984ರ ಗಲಭೆ ಬಗ್ಗೆ ಸ್ಯಾಮ್ ಪಿತ್ರೋಡಾ ಹೇಳಿಕೆ ಸಂಪೂರ್ಣ ತಪ್ಪು. ಈ ಹೇಳಿಕೆಗಾಗಿ ಅವರು ದೇಶದ ಕ್ಷಮೆ ಕೇಳಬೇಕು. ನಾನು ಇದನ್ನು ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಇದನ್ನು ಅವರಿಗೆ ಫೋನ್ ಮೂಲಕವೂ ಹೇಳಿದ್ದೇನೆ’ ಎಂದು ರಾಹುಲ್ ಹೇಳಿದರು.
‘1984ರಲ್ಲಿ ಆಗಿದ್ದು ಆಗಿ ಹೋಗಿದೆ’ ಎಂದು ಮಾಧ್ಯಮದ ಜತೆ ಮಾತನಾಡುತ್ತಾ ಪಿತ್ರೋಡಾ ಅವರು ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಬಿಜೆಪಿಯಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.