ಕೋಲ್ಕತ್ತ: ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಸಂದೇಶ್ಖಾಲಿ ಬಿಜೆಪಿ ಕಾರ್ಯಕರ್ತೆ ಪಿಯಾಲಿ ದಾಸ್ ಶನಿವಾರ ಬಿಡುಗಡೆಯಾಗಿದ್ದಾರೆ. ಕ್ರಿಮಿನಲ್ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ಇವರಿಗೆ ಜಾಮೀನು ನೀಡಿದ್ದು, ವೈಯಕ್ತಿಕ ಬಾಂಡ್ನ ಮೇಲೆ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಸಂದೇಶ್ಖಾಲಿಯ ಮಹಿಳೆಯೊಬ್ಬರಿಂದ ಖಾಲಿ ಹಾಳೆಯ ಮೇಲೆ ಸಹಿ ಪಡೆದು, ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬರೆದಿದ್ದಾರೆ ಎಂದು ದಾಸ್ ಅವರ ವಿರುದ್ಧ ದೂರು ದಾಖಲಾಗಿತ್ತು.
ಡಮ್ ಡಮ್ನ ಕೇಂದ್ರ ಕಾರಾಗೃಹದಿಂದ ಶನಿವಾರ ಹೊರಬಂದ ದಾಸ್ ಅವರಿಗೆ ಬಿಜೆಪಿ ಬೆಂಬಲಿಗರು ಹೂಗುಚ್ಛ ನೀಡಿ ಸ್ವಾಗತಿಸಿದರು.
‘ನಾನು ಸತ್ಯದ ಜೊತೆ ಸಂಚಿನ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನ ಬಂಧನ ಅಕ್ರಮ ಎಂದು ಕೋರ್ಟ್ನಲ್ಲಿ ಸಾಬೀತಾಗಿದೆ. ಸಂದೇಶ್ಖಾಲಿಯ ನೊಂದ ಮಹಿಳೆಯರ ಪರವಗಿ ನಿಲ್ಲುತ್ತೇನೆ ಮತ್ತು ಆಡಳಿತ ಪಕ್ಷದ ಅತ್ಯಾಚಾರದ ವಿರುದ್ಧ ಹೋರಾಡುತ್ತೇನೆ‘ ಎಂದು ದಾಸ್ ವರದಿಗಾರಿಗೆ ತಿಳಿಸಿದ್ದಾರೆ.