ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಪುತ್ರ, ಸಂಸದ ಶ್ರೀಕಾಂತ್ ಶಿಂದೆ ಅವರು ಕೊಲೆ ಅರೋಪಿಯೊಬ್ಬನ ಜತೆಗಿರುವ ಫೋಟೊವೊಂದನ್ನು ಶಿವಸೇನಾ (ಯುಬಿಟಿ) ಬಣದ ಸಂಸದ ಸಂಜಯ್ ರಾವುತ್ ಸೋಮವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, 'ಮಹಾರಾಷ್ಟ್ರವನ್ನು ಗೂಂಡಾಗಳು ಆಳುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ಭಾನುವಾರ ಶ್ರೀಕಾಂತ್ ಶಿಂದೆ ಅವರ ಜನ್ಮದಿನವಾಗಿದ್ದು, ಹಲವರು ಶುಭಾಶಯ ಕೋರಿದ್ದರು. ಮರ್ನೆ ಗ್ಯಾಂಗ್ನ ಕಿಶೋರ್ ಮರ್ನೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ಹೇಮಂತ್ ದಾಬೇಕರ್ ಕೂಡ ಶ್ರೀಕಾಂತ್ ಶಿಂದೆ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದರು.
ಈ ಫೋಟೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಂಜಯ್ ರಾವುತ್, ‘ಗೃಹ ಮಂತ್ರಿ ದೇವೇಂದ್ರಜೀ, ಮಹಾರಾಷ್ಟ್ರವನ್ನು ಗೂಂಡಾಗಳು ಆಳುತ್ತಿದ್ದಾರೆ. ಆಡಳಿತಾರೂಢ ಪಕ್ಷದ ಶಾಸಕರೊಬ್ಬರು ಪೊಲೀಸ್ ಠಾಣೆಯಲ್ಲಿ ಗುಂಡು ಹಾರಿಸುತ್ತಾರೆ. ಗೂಂಡಾಗಳು ಇಷ್ಟು ಪ್ರಬಲರಾಗಿದ್ದು ಯಾಕೆ? ಇದಕ್ಕೆ ಯಾರು ಜವಾಬ್ದಾರಿ’ ಎಂದು ಪ್ರಶ್ನಿಸಿದ್ದಾರೆ.
’ಸರ್ಕಾರದ ಕೃಪಾಕಟಾಕ್ಷದಿಂದ ರಾಜ್ಯದಲ್ಲಿ ಗೂಂಡಾಗಳು ಮುಕ್ತವಾಗಿ ಓಡಾಡುತ್ತಿದ್ದಾರೆ‘ ಎಂದು ರಾವುತ್ ಆರೋಪಿಸಿದ್ದಾರೆ.