ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಮಾರ್ಪಾಡು ಕೋರಿ ಅರ್ಜಿ

ಅರಣ್ಯವಾಸಿಗಳ ಪರ ‘ಸುಪ್ರೀಂ’ಗೆ ಕೇಂದ್ರದ ಮೇಲ್ಮನವಿ
Last Updated 27 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಅರಣ್ಯ ಹಕ್ಕು ಕಾಯ್ದೆ ಅಡಿ ಹಕ್ಕು ತಿರಸ್ಕೃತಗೊಂಡ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂಬ ಆದೇಶವನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಹಕ್ಕು ತಿರಸ್ಕೃತಗೊಂಡಿರುವ ಎಲ್ಲರನ್ನೂ, 21 ರಾಜ್ಯಗಳ ಅರಣ್ಯ ಪ್ರದೇಶದಿಂದ ತೆರವುಗೊಳಿಸುವಂತೆ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ನವೀನ್‌ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ತ್ರಿಸದಸ್ಯ ಪೀಠವು ಇದೇ 13ರಂದು ಆದೇಶ ಹೊರಡಿಸಿದೆ.

ಅರಣ್ಯವಾಸಿಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಮದ ಈ ಆದೇಶಕ್ಕೆ ತಡೆ ನೀಡಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬುಧವಾರ ಸಲ್ಲಿಸಲಾದ ಅರ್ಜಿಯಲ್ಲಿ ಕೋರಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ ಸೇರಿರುವ ಆದಿವಾಸಿಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಬಡವರಾಗಿದ್ದು, ಅನಕ್ಷರರಾಗಿದ್ದಾರೆ. ಸಂಪರ್ಕದಿಂದ ದೂರ ಇರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅವರಿಗೆ ಕಾಯ್ದೆ ಕುರಿತು ಮಾಹಿತಿ ಇಲ್ಲ. ಹಾಗಾಗಿ ಸಂಬಂಧಿಸಿದ ಇಲಾಖೆಗೆ ಅವರು ತಮ್ಮ ಹಕ್ಕುಗಳ ಬಗ್ಗೆ ದೃಢೀಕರಿಸುವುದು ಕಷ್ಟಸಾಧ್ಯ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.

ಕರ್ನಾಟಕದಲ್ಲಿ ಅರಣ್ಯ ಹಕ್ಕನ್ನು ಕೋರಿ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಬುಡಕಟ್ಟು ವರ್ಗದಿಂದ ಸಲ್ಲಿಕೆಯಾಗಿದ್ದ 48,432 ಅರ್ಜಿಗಳ ಪೈಕಿ 35,521 ಅರ್ಜಿಗಳು ತಿರಸ್ಕೃತವಾಗಿವೆ. ಇತರ ಪಾರಂಪರಿಕ ಅರಣ್ಯವಾಸಿ ವಿಭಾಗದಲ್ಲಿ ಸಲ್ಲಿಕೆಯಾಗಿದ್ದ 2,27,014 ಅರ್ಜಿಗಳಲ್ಲಿ 1,41,019 ಅರ್ಜಿಗಳು ತಿರಸ್ಕೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT