ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್ಆರ್ಸಿ) ಪರಿಶೀಲನೆ ಪ್ರಕ್ರಿಯೆಯನ್ನು ಲೋಕಸಭಾ ಚುನಾವಣೆಯ ಕಾರಣ ಕೆಲ ವಾರಗಳ ಮಟ್ಟಿಗೆ ಮುಂದೂಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಪ್ರಕ್ರಿಯೆ ಮುಂದೂಡಲು ನಿರ್ದೇಶನ ನೀಡಿ ಎಂದುಕೋರಿದ್ದ ಕೇಂದ್ರ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತರಾಟೆಗೆ ತೆಗೆದುಕೊಂಡಿದೆ.
ಎನ್ಆರ್ಸಿ ಅಂತಿಮಗೊಳಿಸಲು ಮುಂದಾಗಿರುವ ಕೋರ್ಟ್ನ ಎಲ್ಲ ಯತ್ನಗಳನ್ನೂ ಕೇಂದ್ರ ಗೃಹಸಚಿವಾಲಯ ಹಳಿತಪ್ಪಿಸಲು ಯತ್ನಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಟೀಕಿಸಿದೆ.
ಅಸ್ಸಾಂನಲ್ಲಿ ಎನ್ಆರ್ಸಿ ಕೆಲಸಕ್ಕೆ ನಿಯುಕ್ತಿ ಮಾಡಿರುವ 167 ತುಕಡಿಗಳನ್ನು ವಾಪಸ್ ಕರೆಸಿಕೊಂಡು ಚುನಾವಣೆಗೆ ಬಳಸಿಕೊಳ್ಳಲು ಕೇಂದ್ರ ಇಚ್ಛಿಸಿತ್ತು. ಈ ಕುರಿತು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸಲ್ಲಿಸಿದ್ದ ಅರ್ಜಿ ಕುರಿತು ಯಾವುದೇ ಆದೇಶ ಹೊರಡಿಸಲು ಕೋರ್ಟ್ ಒಪ್ಪಲಿಲ್ಲ.
‘ಚುನಾವಣೆ ಶಾಂತಿಯುತವಾಗಿ ನಡೆಯಬೇಕು, ಅಂತೆಯೇ ಎನ್ಆರ್ಸಿ ಕೆಲಸವೂ ಪೂರ್ಣಗೊಳ್ಳಬೇಕು’ ಎಂದು ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿತು. ಎನ್ಆರ್ಸಿ ಅಂತಿಮ ಪಟ್ಟಿ ತಯಾರಿಸಲು ಜುಲೈ 31, 2019 ಗಡುವು ಇದೆ.
ಬಿಜೆಪಿ ಘಟಕ ಬರ್ಖಾಸ್ತು ಬೆದರಿಕೆ
‘ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ‘ಪೌರತ್ವ (ತಿದ್ದುಪಡಿ) ಮಸೂದೆ’ಯನ್ನು ಜಾರಿಗೆ ತಂದರೆ ಮಿಜೋರಾಂನ ಬಿಜೆಪಿ ಘಟಕವನ್ನು ವಿಸರ್ಜನೆ ಮಾಡುತ್ತೇವೆ’ ಎಂದು ಮಿಜೋರಾಂ ಬಿಜೆಪಿ ಅಧ್ಯಕ್ಷ ಜಾನ್ ವಿ. ಹ್ಲೂನಾ ಎಚ್ಚರಿಕೆ ನೀಡಿದ್ದಾರೆ.