ನವದೆಹಲಿ: ಆರು ಮಂದಿ ನ್ಯಾಯಾಧೀಶೆಯರ ಕಾರ್ಯ ತೃಪ್ತಿಕರವಾಗಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ, ಅವರನ್ನು ಸೇವೆಯಿಂದ ವಜಾಗೊಳಿಸಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ಸಂಜಯ್ ಕರೋಲ್ ಅವರನ್ನು ಒಳಗೊಂಡ ನ್ಯಾಯಪೀಠವು, ಮೂವರು ಮಾಜಿ ನ್ಯಾಯಾಧೀಶೆಯರು ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ ಮತ್ತು ಅದನ್ನು ರಿಟ್ ಅರ್ಜಿಯಾಗಿ ಪರಿಗಣಿಸಲು ತೀರ್ಮಾನಿಸಿದೆ.
ಈ ವಿಷಯದಲ್ಲಿ ನೆರವು ನೀಡಲು ವಕೀಲ ಗೌರವ್ ಅಗರ್ವಾಲ್ ಅವರನ್ನು ಅಮಿಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ನೆರವಾಗಲು ನೇಮಕವಾಗುವ ವಕೀಲ) ನೇಮಿಸಿದೆ.
ಈ ಆರು ಮಂದಿ ಮಾಜಿ ನ್ಯಾಯಾಧೀಶೆಯರು ಪ್ರೊಬೆಷನರಿ ಸಮಯದಲ್ಲಿ ನಿರ್ವಹಿಸಿದ ಕಾರ್ಯವು ತೃಪ್ತಿಕರವಾಗಿಲ್ಲ ಎಂದು ಅವರನ್ನು ವಜಾಗೊಳಿಸಿ ಜೂನ್ 2023ರಲ್ಲಿ ರಾಜ್ಯ ಕಾನೂನು ಇಲಾಖೆ ಆದೇಶ ಹೊರಡಿಸಿತ್ತು.