ನವದೆಹಲಿ: ಸಂಸತ್ತಿನ ಭದ್ರತಾ ಲೋಪದ ವಿಚಾರವಾಗಿ ಚರ್ಚೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ್ದು ಹಾಗೂ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ವಿರೋಧ ಪಕ್ಷಗಳ 45 ಸದಸ್ಯರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.
ಈ ಪೈಕಿ 34 ಸಂಸದರನ್ನು ಚಳಿಗಾಲದ ಅಧಿವೇಶನದ ಬಾಕಿ ಅವಧಿಗೆ ಮತ್ತು ಉಳಿದ 11 ಮಂದಿಯನ್ನು ಹಕ್ಕು ಬಾಧ್ಯತಾ ಸಮಿತಿ ವರದಿ ಬರುವವರೆಗೆ ಅಮಾನತು ಮಾಡಲಾಗಿದೆ. ರಾಜ್ಯಸಭೆ ನಾಯಕ ಪಿಯೂಷ್ ಗೋಯಲ್ ಅವರು ಮಂಡಿಸಿದ ಅಮಾನತು ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹಕ್ಕು ಬಾಧ್ಯತಾ ಸಮಿತಿಗೆ ಸೂಚಿಸಲಾಗಿದೆ. ಅಲ್ಲಿಯವರೆಗೂ 11 ಸಂಸದರು ಸದನದ ಕಲಾಪಗಳಿಗೆ ಹಾಜರಾಗುವಂತಿಲ್ಲ.
ಕಾಂಗ್ರೆಸ್ನ ಪ್ರಮೋದ್ ತಿವಾರಿ, ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಅವರು ಅಮಾನತಾದ ಸಂಸದರ ಪಟ್ಟಿಯಲ್ಲಿದ್ದಾರೆ.