ಸಿಲಿಗುರಿ, ಕೋಲ್ಕತ್ತ: ಪ್ರತ್ಯೇಕ ‘ಉತ್ತರ ಬಂಗಾಳ‘ ರಾಜ್ಯವನ್ನು ರಚಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ ಎಂದು ಕೇಂದ್ರ ಸಚಿವ ಜಾನ್ ಬರ್ಲಾ ಮಂಗಳವಾರ ಹೇಳಿದರು.
ಬಿಜೆಪಿಯ ಶಹೀದ್ ಸಮ್ಮಾನ್ ಯಾತ್ರಾ ನಿಮಿತ್ತ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ತ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಲಿದ್ದು, ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಫಲಪ್ರದವಾಗುವಂತೆ ನೋಡಿಕೊಳ್ಳುತ್ತೇನೆ ಎಂದರು.
ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಮತಗಳಿಸುತ್ತಿದೆ. ಆದರೆ, ಅವರ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲಿಪುರ್ದುರ್ ಕ್ಷೇತ್ರವನ್ನು ಪ್ರತಿನಿಧಿಸುವ ಅವರು ಸದ್ಯ ಕೇಂದ್ರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯ ಹೆಸರಿನಲ್ಲಿ ಭಯಭೀತಗೊಳಿಸುವ ಮತ್ತು ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ. ಚುನಾವಣೋತ್ತರದ ಹಿಂಸಾಚಾರವೇ ಇದಕ್ಕೆ ಉದಾಹರಣೆ ಎಂದು ಬರ್ಲಾ ಹೇಳಿದರು.