ನವದೆಹಲಿ: ದೆಹಲಿಯ ಶಹಬಾದ್ ಪ್ರದೇಶದ 16 ವರ್ಷದ ಬಾಲಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿ ಹೊರಬೀಳುತ್ತಿದೆ.
ಆರೋಪಿ ಸಾಹೀಲ್ 15 ದಿನಗಳ ಹಿಂದೆಯೇ ಕೃತ್ಯಕ್ಕಾಗಿ ಚಾಕು ಖರೀದಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಚಾಕುವಿಗಾಗಿ ಹುಡುಕಾಟ ನಡೆಸಿದ್ದಾರೆ.
16 ವರ್ಷದ ಬಾಲಕಿ ಸಾಕ್ಷಿಯನ್ನು 20ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದಿದ್ದ ಸಾಹೀಲ್, ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಹೀಗಾಗಿ, ಸಾಕ್ಷಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಆಕೆಯ ಮೃತದೇಹದಲ್ಲಿ 35 ಗಾಯಗಳಾಗಿದ್ದವು. ತಲೆ ಸಂಪೂರ್ಣ ಜಜ್ಜಿಹೋಗಿತ್ತು.
ತನಿಖೆಯ ದಾರಿ ತಪ್ಪಿಸಲು ಸಾಹೀಲ್ ಪದೇ ಪದೇ ತನ್ನ ಹೇಳಿಕೆಯನ್ನು ಬದಲಿಸುತ್ತಿದ್ದ. 15 ದಿನಗಳ ಹಿಂದೆಯೇ ಚಾಕು ಖರೀದಿಸಿದ್ದಾಗಿ ಆತ ಹೇಳಿದ್ದು, ಈಗ ಪೊಲಿಸರು ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಕೃತ್ಯಕ್ಕೂ ಕೆಲ ದಿನಗಳ ಹಿಂದೆಯೇ ಸಾಹೀಲ್ ಚಾಕು ಖರೀದಿಸಿದ್ದು, ಸಾಕ್ಷಿ ಹತ್ಯೆಗೆ ಆತ ಮೊದಲೇ ಸಂಚು ರೂಪಿಸಿದ್ದ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಆಕೆ ನನ್ನನ್ನು ಕಡೆಗಣಿಸಿದ್ದ ಕುರಿತಂತೆ ನಡೆದ ಮಾತಿನ ಚಕಮಕಿ ವೇಳೆ ಹತ್ಯೆ ನಡೆಸಿದ್ದಾಗಿ ಸಾಹೀಲ್ ಹೇಳಿದ್ದಾನೆ.
ಆರೋಪಿಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಎರಡು ದಿನಗಳ ಅವಧಿಗೆ ಕಸ್ಟಡಿಗೆ ಪಡೆಯಲಾಗಿದೆ.
ಫೋನ್ ಕರೆಯ ನೆಟ್ವರ್ಕ್ ಜಾಡು ಹಿಡಿದ ಪೊಲೀಸರು ಆತನನ್ನು ಉತ್ತರಪ್ರದೇಶದ ಬುಲಂದ್ ಶಹರ್ನಲ್ಲಿ ಬಂಧಿಸಿದ್ದರು.
ಸೋಮವಾರ ಹತ್ಯೆ ನಡೆದು 25 ನಿಮಿಷಗಳ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ದಾರಿಹೋಕರಲ್ಲಿ ಯಾರೋಬ್ಬರೂ ಪೊಲೀಸರಿಗೆ ಮಾಹಿತಿ ನೀಡುವ ಧೈರ್ಯ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.