ತಿರುವನಂತಪುರ:ಪ್ರವಾಹದಿಂದಾಗಿ ಕೇರಳದ ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.
ಕೇರಳದಲ್ಲಿ ನಿತರಂತರ ಮಳೆಯಿಂದಾಗಿ ತೀವ್ರ ಪ್ರವಾಹ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಲು ರಾಜನಾಥ ಸಿಂಗ್ ಅವರು, ಭಾನುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜತೆಗೂಡಿ ವೈಮಾನಿಕ ಸಮೀಕ್ಷೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಜನಜೀನವ ಸೇರಿದಂತೆ ಅಪಾರ ಹಾನಿಯಾಗಿದ್ದು, ಪರಿಸ್ಥಿತಿ ಬಹಳ ಹದಗೆಟ್ಟಿದೆ. ಈ ಸವಾಲುಗಳನ್ನು ಎದುರಿಸಲು ರಾಜ್ಯಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಹೇಳಿದರು.
HM Shri @rajnathsingh conducting the aerial survey of flood affected areas in Kerala. He is accompanied by the Chief Minister of Kerala Shri Pinarayi Vijayan and the MoS Tourism Shri @alphonstourism pic.twitter.com/mqy8FFeAfo
— HMO India (@HMOIndia) August 12, 2018
ಪರಿಹಾರ; ರಕ್ಷಣಾ ಕಾರ್ಯಕ್ಕೂ ಅಡ್ಡಿ
ಇತ್ತ ಕೊಂಚ ಬಿಡುವು ನೀಡಿದ್ದ ಮಳೆ ಇಂದು ಮತ್ತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿದೆ. ಪ್ರವಾಹ ಮತ್ತು ಭೂಕುಸಿತ ಘಟನೆಗಳು ಮುಂದುವರಿದಿವೆ. ಇಡುಕ್ಕಿ ಹಾಗೂ ಕೆಲ ಜಲಾಶಯಗಳ ನೀರನಮಟ್ಟ ತುಸು ಕಡಿಮೆಯಾಗಿದೆ(2,403 ಅಡಿ ಗರಿಷ್ಠಮಟ್ಟ ಇದ್ದು ಇಂದು ಬೆಳಿಗ್ಗೆ 10ಕ್ಕೆ 2,399.16ಕ್ಕೆ ಇಳಿದಿದೆ). ಆದರೂ, ಮೂರು ದಿನಗಳಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಹಾಗೂ ರಕ್ಷಣಾ ಕಾರ್ಯಗಳನ್ನು ನಡೆಸಲು ವಿವಿಧ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಆದರೆ, ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ.
ಎನ್ಡಿಆರ್ಎಫ್, ವಾಯುಪಡೆ, ನೌಕಾಪಡೆ, ಮದ್ರಾಸ್ ರೆಜಿಮೆಂಟ್ನ ತಂಡ, ಎಸ್ಟಿಆರ್ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸ್ಥಳೀಯರನ್ನು ರಕ್ಷಿಸಲು ಹೆಣಗಾಡುತ್ತಿವೆ. ಸ್ಥಳೀಯ ಸಂಪನ್ಮೂಲಗಳಾದ ಕಟ್ಟಿಗೆ, ಬೋಂಬು, ದಿಮ್ಮೆಗಳನ್ನು ಬಳಸಿ ಕೊಚ್ಚಿಹೋಗಿರುವ ಸೇತುವೆಗಳು ಹಾಗೂ ರಸ್ತೆಗಳಿಗೆ ತಾತ್ಕಾಲಿಕ ಸೇತುವೆ ನಿರ್ಮಿಸುವಲ್ಲಿ ತೊಡಗಿವೆ. ಈ ಕಾರ್ಯಕ್ಕೂ ಮಳೆ ಬಿಡುತ್ತಿಲ್ಲ.
ಸುಮಾರು 14 ಸಾವಿರ ಜನ ಆಶ್ರಯ ಪಡೆದಿರುವ ವಯನಾಡಿನ ಶಿಬಿರ ಸೇರಿದಂತೆ 60 ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ವಿವಿಧ ಸ್ಥಳಗಳಲ್ಲಿ ತೆರೆಯಲಾದ ಶಿಬಿರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.ಘಟ್ಟ ಪ್ರದೇಶದ ವಯನಾಡು ಜಿಲ್ಲೆಯ ಮಣಂತವಡಿ ಮತ್ತು ವೈಥಿರಿ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ. ರಸ್ತೆಗಳು ಕೊಚ್ಚಿಹೋಗಿ, ಮನೆಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
16 ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆ ಎಚ್ಚರಿಕೆ
ಆ.13ರ ವರೆಗೆ ಕೇರಳ ಸೇರಿದಂತೆ 16 ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ನಿನ್ನೆಯೇ ಎಚ್ಚರಿಕೆ ನೀಡಿದೆ.
ಇಡುಕ್ಕಿ, ವಯನಾಡು, ಕಣ್ಣೂರು, ಎರ್ನಾಕುಲಂ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಆ.12ರ ಹವಾಮಾನ ಮತ್ತು ಮೋಡ, ಗಾಳಿಯ ಚಲನೆ ಹಾಗೂ ಯಾವೆಲ್ಲಾ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬ ವಿಡಿಯೊವನ್ನು ಭಾರತೀಯ ಹವಾಮಾನ ಇಲಾಖೆ ಟ್ವಿಟ್ ಮಾಡಿದೆ.
Synoptic Conditions and weather warnings based on 12 August pic.twitter.com/xTHDBoyyGC
— India Met. Dept. (@Indiametdept) August 12, 2018
#KeralaFloods #NDRF at Uppthodu Village, Idduki. pic.twitter.com/A36NHtuFGg
— NDRF (@NDRFHQ) August 12, 2018
* ಇದನ್ನೂ ಓದಿ...
ಸೇತುವೆ ಮುಳುಗುವ ಮೊದಲು ಮಗು ಕಾಪಾಡಿದ ಧೀರ ಕನ್ಹಯ್ಯಕುಮಾರ್ ಕೇರಳದಲ್ಲೀಗ ಮನೆಮಾತು
ಎಲ್ಲಿ ನೋಡಿದರೂ ನೀರೇ ನೀರು, ಸುರಿಯುವ ಮಳೆ, ಸೇತುವೆಯನ್ನು ಕೊಚ್ಚಿಹಾಕುವ ಆವೇಶದಲ್ಲಿ ಉಕ್ಕೇರುತ್ತಿರುವ ನದಿ. ಸೇತುವೆಯ ಈಚೆದಡದಲ್ಲಿ ಒಂದಿಷ್ಟು ಜನರಿದ್ದರೆ, ಆಚೆದಡದಲ್ಲಿ ಅಪ್ಪನ ಬೆನ್ನಿಗೆ ನಿಂತ ಪುಟ್ಟ ಮಗಳು, ಅವಳಿಗೆ ತುರ್ತಾಗಿ ವೈದ್ಯಕೀಯ ಸೇವೆ ಅಗತ್ಯ.‘ಸೇತುವೆ ದಾಟಬೇಕು ಆದರೆ ಧೈರ್ಯ ಸಾಲುತ್ತಿಲ್ಲ’ ಎಂದು ಹಿಂಜರಿದು ನಿಂತ ಅಪ್ಪ...
ಕಣ್ಣಳತೆಯಲ್ಲಿ ಇದೆಲ್ಲವನ್ನೂ ಗಮನಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್ಡಿಆರ್ಎಫ್) ಅಧಿಕಾರಿ ಕನ್ಹಯ್ಯ ಕುಮಾರ್ಗೆ ನದಿನೀರಿನಲ್ಲಿಸೇತುವೆ ಕೆಲವೇ ನಿಮಿಷಗಳಲ್ಲಿ ಮುಳುಗಲಿದೆ ಎನಿಸಿತು. ತಕ್ಷಣ ಅವರು ಮಗುವಿದ್ದ ಜಾಗಕ್ಕೆ ಓಡಿಹೋಗಿ ಮಗುವನ್ನು ಎತ್ತಿಕೊಂಡರು. ಆಚೆದಡಕ್ಕೆ ಓಡಲು ಆರಂಭಿಸಿದರು.ಮಗುವಿನ ತಂದೆಯೂ ಕನ್ಹಯ್ಯ ಅವರನ್ನು ಅನುಸರಿಸಿದರು.
ಇವರು ಕ್ಷೇಮವಾಗಿ ಹಿಂದಿರುಗಿ ಬರಲಿ ಈಚೆದಡದಲ್ಲಿ ನಿಂತಿದ್ದ ನೂರಾರು ಮಂದಿ ನಿರೀಕ್ಷಿಸುತ್ತಿದ್ದರು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಮಗು ಮತ್ತು ಮಗುವಿನ ತಂದೆಯ ಜೊತೆಗೆ ಹಿಂದಿರುಗಿ ಬಂದ ಕನ್ಹಯ್ಯ ಕುಮಾರ್ ಸುಧಾರಿಸಿಕೊಳ್ಳುವ ಮೊದಲೇ ಸೇತುವೆಯ ಮೇಲೆ ನೀರು ಹರಿಯಿತು. ಅಲ್ಲಿದ್ದ ಜನರಿಗೆ ಎನ್ಡಿಆರ್ಎಫ್ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯ ಬಗ್ಗೆ ಹೆಮ್ಮೆಯೂ ಉಕ್ಕಿತು. ಈ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.