ನವದೆಹಲಿ: ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಟೀಕಿಸಿರುವ ಡಿಎಂಕೆ ಸಂಸದ ಡಿ.ಎನ್.ಬಿ ಸೆಂಥಿಲ್ ಕುಮಾರ್ ಅವರ ಹೇಳಿಕೆಯನ್ನು ಲೋಕಸಭೆ ಕಡತದಿಂದ ಸ್ಪೀಕರ್ ಓಂ ಬಿರ್ಲಾ ತೆಗೆದು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ಸೆಂಥಿಲ್ ಕುಮಾರ್, ‘ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರ ಗೆಲ್ಲುವ ಶಕ್ತಿ ಬಿಜೆಪಿಗಿದೆ ಎಂದು ಜನರಿಗೆ ಅರಿವಾಗಿದೆ. ನಾವು ಆ ಪ್ರದೇಶವನ್ನು ಗೋಮೂತ್ರ ರಾಜ್ಯಗಳು ಎಂದು ಕರೆಯುತ್ತೇವೆ’ ಎಂದು ಹೇಳಿದ್ದರು.
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಸಚಿವ ಸಂಥಿಲ್ ಕುಮಾರ್ ಕ್ಷಮೆಯಾಚಿಸಿದ್ದರು.
‘ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡುವ ವೇಳೆ, ಅನುಚಿತ ಪದವೊಂದನ್ನು ನಾನು ಬಳಸಿದ್ದೇನೆ. ದುರುದ್ದೇಶದಿಂದ ಈ ಪದವನ್ನು ಬಳಸಿಲ್ಲ. ಈ ಬಗ್ಗೆ ಕ್ಷಮೆಯಾಚಿಸುತ್ತೇನೆ’ ಎಂದು ತಮ್ಮ ಎಕ್ಸ್ನಲ್ಲಿ ಸೆಂಥಿಲ್ ಬರೆದುಕೊಂಡಿದ್ದಾರೆ.