ನವದೆಹಲಿ: ಲೋಕಸಭೆಯ 13 ಸಂಸದರನ್ನು ಅಮಾನತುಗೊಳಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸ್ಪೀಕರ್ ಓಂ ಬಿರ್ಲಾ, ‘ಸಂಸತ್ತಿನ ಶಿಷ್ಟಾಚಾರ ಮತ್ತು ಘನತೆ’ಯನ್ನು ಎತ್ತಿಹಿಡಿಯಲು ‘ಕಟ್ಟುನಿಟ್ಟಿನ ಕ್ರಮ’ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಇನ್ನುಳಿದ ಅವಧಿಯ ಕಲಾಪ ಸುಗಮವಾಗಿ ನಡೆಯಲು ಸಹಕಾರ ಹಾಗೂ ಬೆಂಬಲ ಕೋರಿ ಸಂಸದರಿಗೆ ಶನಿವಾರ ಪತ್ರ ಬರೆದಿರುವ ಅವರು, ‘ಸಂಸತ್ ಸಂಕೀರ್ಣದ ಭದ್ರತೆಯು ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ’ ಎಂದು ಸ್ಪಷ್ಟಪಡಿಸಿದರು. ಆ ಮೂಲಕ ಬುಧವಾರ ನಡೆದ ಭದ್ರತಾ ವೈಫಲ್ಯ ಘಟನೆಗೆ ಸರ್ಕಾರವನ್ನು ಹೊಣೆಯನ್ನಾಗಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು.
ಲೋಕಸಭೆಯಲ್ಲಿನ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದು ವಿರೋಧ ಪಕ್ಷಗಳು ಗದ್ದಲ ಹಾಗೂ ಪ್ರತಿಭಟನೆ ನಡೆಸಿದ್ದರಿಂದ ಶುಕ್ರವಾರ ಉಭಯ ಸದನಗಳ ಕಲಾಪ ನಡೆದಿರಲಿಲ್ಲ.
ಶಾ ಅವರು ಹೇಳಿಕೆ ನೀಡದಿದ್ದರೆ ಸೋಮವಾರದ ಕಲಾಪಕ್ಕೂ ಅಡ್ಡಿಪಡಿಸುವ ಸೂಚನೆಯನ್ನು ಪ್ರತಿಪಕ್ಷಗಳು ನೀಡಿವೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದು ಸಹಕಾರ ಕೋರಿದ್ದಾರೆ.
ಸಂಸತ್ನಲ್ಲಿ ಭದ್ರತಾ ವೈಫಲ್ಯದ ಘಟನೆಗಳು ಈ ಹಿಂದೆಯೂ ನಡೆದಿದ್ದವು. ಪಿಸ್ತೂಲ್ ಹಿಡಿದು ಬಂದ, ಘೋಷಣೆಗಳನ್ನು ಕೂಗಿದ, ಸಂದರ್ಶಕರ ಗ್ಯಾಲರಿಯಿಂದ ಜಿಗಿದ ಹಾಗೂ ಕರಪತ್ರಗಳನ್ನು ಎಸೆದ ಘಟನೆಗಳು ನಡೆದಿದ್ದವು. ಆದರೆ ಆ ಸಂದರ್ಭಗಳಲ್ಲಿ ಸದನವು ಒಗ್ಗಟ್ಟು ಪ್ರದರ್ಶಿಸಿತ್ತು ಎಂಬುದನ್ನೂ ಪತ್ರದಲ್ಲಿ ನೆನಪಿಸಿದ್ದಾರೆ.