ಲಖನೌ: ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯ ಖಂಡಿಸಿ ರಾಜ್ಯ ಮುಂಗಾರು ಅಧಿವೇಶನ ಆರಂಭಗೊಂಡ ಮೊದಲ ದಿನ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸೋಮವಾರ ಕೈಗೊಂಡಿದ್ದ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ತಡೆ ನೀಡಿದ್ದಾರೆ.
ಉತ್ತರ ಪ್ರದೇಶದ ವಿಧಾನ ಭವನಕ್ಕೆ ಹೊರಟಿದ್ದ ಮೆರವಣಿಗೆಯನ್ನು ಎಸ್ಪಿ ಕಚೇರಿ ಬಳಿಯ ವಿಕ್ರಮಾದಿತ್ಯ ಮಾರ್ಗದಲ್ಲಿ ಪೊಲೀಸರು ತಡೆದಿದ್ದಾರೆ. ಅನುಮತಿ ನೀಡಿದ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಮೆರವಣಿಗೆ ಹೊರಟ ಕಾರಣ ತಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ಮೊರ್ಡಿಯಾ ತಿಳಿಸಿದರು.
ಪೊಲೀಸ್ ವರ್ತನೆ ಖಂಡಿಸಿ ಅಖಿಲೇಶ್ ಮತ್ತು ಪಕ್ಷದ ನಾಯಕರು ರಸ್ತೆಮಧ್ಯೆ ಕುಳಿತು ಧರಣಿ ನಡೆಸಿದರು.ಪ್ರತಿಭಟನಾ ಸ್ಥಳದಲ್ಲಿ ಮಾಜಿ ಸ್ಪೀಕರ್ಮಾತಾ ಪ್ರಸಾದ್ ಪಾಂಡೆ ನೇತೃತ್ವದಲ್ಲಿ ಎಸ್ಪಿ ನಾಯಕರು ಅಣಕು ಅಧಿವೇಶನ ನಡೆಸಿದರು.
ಭಾರತದಂತಹ ಗ್ರಾಮೀಣ ಪ್ರದೇಶದಲ್ಲಿ ಹಾಲು, ಮೊಸಲು, ತುಪ್ಪದ ಮೇಲೆ ಜಿಎಸ್ಟಿ ವಿಧಿಸಲಾಗುವುದು ಎಂದು ಯಾರೂ ಉಹಿಸಿರಲಿಲ್ಲ. ಖಾದ್ಯ ತೈಲಗಳು ಗಗನಕ್ಕೇರಿದೆ ಎಂದು ಯಾದವ್ ಆರೋಪಿಸಿದರು.