ಮುಂಬೈ: ಎರಡರಿಂದ ನಾಲ್ಕು ತಿಂಗಳ ಕಾಲ ಈರುಳ್ಳಿ ತಿನ್ನದೇ ಇದ್ದರೆ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ ದಾದಾ ಭುಸೆ ಹೇಳಿದ್ದಾರೆ.
ಈರುಳ್ಳಿ ರಫ್ತಿನ ಮೇಲೆ ಶೇ 40 ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಸಚಿವರು ಈ ಹೇಳಿಕೆ ನೀಡಿದ್ದಾರೆ.
‘ಕೇಂದ್ರ ಸರ್ಕಾರವು ಸರಿಯಾದ ಸಮಾಲೋಚನೆ ನಡೆಸಿಯೇ ಈ ನಿರ್ಧಾರವನ್ನು ಕೈಗೊಂಡಿದೆ. ಬೆಲೆ ಏರಿಕೆಯನ್ನು ಪರಿಶೀಲಿಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಲು ಈ ಕ್ರಮ ಕೈಗೊಂಡಿದೆ’ ಎನ್ನುವ ಮೂಲಕ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
₹10 ಲಕ್ಷ ಮೌಲ್ಯದ ವಾಹನವನ್ನು ಬಳಸುವವರಿಗೆ, ₹10 ಅಥವಾ ₹20 ಹೆಚ್ಚಿನ ದರದಲ್ಲಿ ಈರುಳ್ಳಿಯನ್ನು ಖರೀದಿಸುವುದು ಹೊರೆಯಲ್ಲ. ಈರುಳ್ಳಿಯನ್ನು ಕೊಳ್ಳಲು ಶಕ್ತರಲ್ಲದವರು, ಎರಡು-ನಾಲ್ಕು ತಿಂಗಳ ಕಾಲ ಅದನ್ನು ತಿನ್ನದೇ ಇದ್ದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ.
ಹಣಕಾಸು ಸಚಿವಾಲಯವು ಆಗಸ್ಟ್ 19 ರಂದು 2023ರ ಡಿಸೆಂಬರ್31ರವರೆಗೆ ಈರುಳ್ಳಿ ರಫ್ತಿನ ಮೇಲೆ 40 ಪ್ರತಿಶತ ಸುಂಕವನ್ನು ವಿಧಿಸಿ ಆದೇಶ ಹೊರಡಿಸಿದೆ.