ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election: ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವರೇ ಬಂಡಿ ಸಂಜಯ್‌?

ತೆಲಂಗಾಣದ ಕರೀಂನಗರ ವಿಧಾನಸಭಾ ಕ್ಷೇತ್ರ
Published 17 ನವೆಂಬರ್ 2023, 11:48 IST
Last Updated 17 ನವೆಂಬರ್ 2023, 11:48 IST
ಅಕ್ಷರ ಗಾತ್ರ

ಕರೀಂನಗರ (ತೆಲಂಗಾಣ): ವಿಧಾನಸಭೆ ಚುನಾವಣೆಯಲ್ಲಿ ಕರೀಂನಗರ ಕ್ಷೇತ್ರದಿಂದ ಎರಡು ಬಾರಿ ಪರಾಭವಗೊಂಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರೀಂನಗರ ಸಂಸದ ಬಂಡಿ ಸಂಜಯ್‌ಕುಮಾರ್‌ ಅವರು ಈ ಸಲದ ಚುನಾವಣೆಯಲ್ಲಿ ಗೆಲುವು ಕಾಣುವ ವಿಶ್ವಾಸ ಹೊಂದಿದ್ದಾರೆ.

ಸಂಜಯ್‌ಕುಮಾರ್ ಅವರನ್ನು ಈಚೆಗಷ್ಟೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಸ್ಥಾನದಿಂದ ಬದಲಿಸಲಾಗಿದೆ.  ತೆಲಂಗಾಣದ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಗಂಗುಲ ಕಮಲಾಕರ್‌ ಅವರು 2014 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಸಂಜಯ್‌ಕುಮಾರ್‌ ಅವರ ವಿರುದ್ಧ ಜಯ ಸಾಧಿಸಿದ್ದರು. 

ಸಂಜಯ್‌ಕುಮಾರ್‌ ಅವರು ತಮ್ಮ ಹಿಂದುತ್ವದ ದೃಷ್ಟಿಕೋನದಿಂದ ಜನಪ್ರಿಯರಾಗಿದ್ದರೆ, ಕಮಲಾಕರ್‌ ಅವರು ಕ್ಷೇತ್ರದ ಹೆಸರುವಾಸಿ ನಾಯಕರು. ಕರೀಂನಗರ ಬಳಿಯ ಬೊಮ್ಮಕಲ್‌ ಗ್ರಾಮದ ಸರಪಂಚರಾಗಿರುವ  ಪುರುಮಲ್ಲ ಶ್ರೀನಿವಾಸ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರಕ್ಕೆ ಇವರು ಹೊಸ ಮುಖ.

ಈ ಮೂವರೂ ಹಿಂದುಳಿದ ವರ್ಗದ ಮುನ್ನೂರು ಕಾಪು ಸಮುದಾಯಕ್ಕೆ ಸೇರಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕರೀಂನಗರದಿಂದ ಭರ್ಜರಿ ಜಯ ಗಳಿಸಿದ ಸಂಜೀವ್‌ಕುಮಾರ್‌ ಅವರು ಕ್ಷೇತ್ರದಲ್ಲಿ  ಹಿಂದುತ್ವದ ಪರ ಒಲವಿರುವವರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಹೆಚ್ಚು ಜನಪ್ರಿಯರಾಗಿದ್ದರೆ, ಕಮಲಾಕರ್‌ ಅವರು ಗ್ರಾಮೀಣ ಪ್ರದೇಶ ಮತ್ತು ಬಿಆರ್‌ಎಸ್‌ ಸರ್ಕಾರದ ಕಲ್ಯಾಣ ಯೋಜನೆಗಳಿಂದ ತಮ್ಮ ಬಲ ವೃದ್ಧಿಸಿಕೊಂಡಿದ್ದಾರೆ.

ತೆಲಂಗಾಣದಲ್ಲಿ  ಸಂಜಯ್‌ಕುಮಾರ್‌ ಅವರ ನೇತೃತ್ವದಲ್ಲಿ ಬಿಜೆಪಿಯು ವಿಧಾನಸಭೆಯ ಉಪಚುನಾವಣೆಗಳು ಮತ್ತು ಬೃಹನ್‌ ಹೈದರಾಬಾದ್‌ ಮಹಾನಗರಪಾಲಿಕೆ ಚುನಾವಣೆಯಲ್ಲಿ ಯಶ ಕಂಡಿತ್ತು.

ಸಂಜಯ್‌ಕುಮಾರ್‌ ಅವರು ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ತೆಲಂಗಾಣದಲ್ಲಿ ತ್ವರಿತ ಪ್ರಗತಿ ಸಾಧಿಸಲು ಸಾಧ್ಯ ಎಂಬುದಕ್ಕೆ ಒತ್ತು ನೀಡಿದ್ದಾರೆ. ತಾವು ವಿಧಾನಸಭೆ ಪ್ರವೇಶಿಸುವುದನ್ನು ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ತಡೆಯುತ್ತಿದ್ದಾರೆ ಎಂದೂ ದೂರಿದ್ದಾರೆ.

ಬಿಆರ್‌ಎಸ್‌ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಿರುವ ಕಮಲಾಕರ್‌ ಅವರು ಈ ಯೋಜನೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದಕ್ಕೆ ತಮ್ಮ ಮರುಆಯ್ಕೆ ಅಗತ್ಯ ಎನ್ನುತ್ತಿದ್ದಾರೆ. ‘ನನ್ನ ಕೊನೆ ಉಸಿರಿರುವವರೆಗೂ ಕರೀಂನಗರ ಜನರ ಸೇವೆ ಮಾಡುತ್ತೇನೆ’ ಎಂದಿದ್ದಾರೆ.

ತೆಲಂಗಾಣದಲ್ಲಿ ಬಂಡಿ ಸಂಜಯ್‌ ಎಂದೇ ಜನಜನಿತವಾಗಿರುವ ಸಂಜಯ್‌ಕುಮಾರ್‌, ಕಾರ್ಪೊರೇಟರ್‌ ಆಗಿ  ರಾಜಕೀಯ ಜೀವನ ಆರಂಭಿಸಿ 2005– 2018ರವರೆಗೆ ಸೇವೆ ಸಲ್ಲಿಸಿದ್ದರು. ಕಮಲಾಕರ್‌ ಬಿಆರ್‌ಎಸ್‌ ಅಭ್ಯರ್ಥಿಯಾಗಿ 2014 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದರು. 2009ರಲ್ಲಿ ಅವರು ಟಿಡಿಪಿಯಿಂದ ಸ್ಪರ್ಧಿಸಿದ್ದರು. 

2014ರ ಚುನಾವಣೆಯಲ್ಲಿ ಕಮಲಾಕರ್‌ ಅವರು 77,029 (ಶೇ 40.22) ಮತಗಳನ್ನು ಪಡೆದಿದ್ದರೆ, ಸಂಜಯ್‌ಕುಮಾರ್‌ 52,455 (ಶೇ 27.8) ಮತಗಳನ್ನು ಗಳಿಸಿದ್ದರು. 2018ರ ಚುನಾವಣೆಯಲ್ಲಿ ಕಮಲಾಕರ್‌ ಅವರು 14,974 ಮತಗಳ ಅಂತರದಿಂದ ಸಂಜಯ್‌ ಅವರನ್ನು ಸೋಲಿಸಿದ್ದರು. ತೆಲಂಗಾಣದಲ್ಲಿ ಇದೇ 30ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT