ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಡುವೆ ಒಗ್ಗಟ್ಟಿದೆ: ಕಾಂಗ್ರೆಸ್ ನಾಯಕ

Published 8 ಫೆಬ್ರುವರಿ 2024, 13:47 IST
Last Updated 8 ಫೆಬ್ರುವರಿ 2024, 13:47 IST
ಅಕ್ಷರ ಗಾತ್ರ

ನಾಗ್ಪುರ: ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ಮೈತ್ರಿಕೂಟದ ನಾಯಕರ ನಡುವೆ ಉತ್ತಮ ಹೊಂದಾಣಿಕೆ ಮತ್ತು ಸಮನ್ವಯ ಇದೆ. ಆದರೆ, ಬಿಜೆಪಿ ಉದ್ದೇಶಪೂರ್ವಕವಾಗಿ ಮೈತ್ರಿಕೂಟದ ಬಗ್ಗೆ ತಪ್ಪು ಮಾಹಿತಿ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್‌ ಕಾರ್ಯದರ್ಶಿ ಡಾ. ವಿನೀತ್‌ ಪುನಿಯಾ ಆರೋಪಿಸಿದ್ದಾರೆ.

ಕಳೆದ ವಾರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚಾಲನೆ ನೀಡಿದ ‘ಜೈ ಜವಾನ್‌’ ಅಭಿಯಾನದ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಪುನಿಯಾ ಅವರು, ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಉತ್ತಮ ಸಮನ್ವಯ ಮತ್ತು ಹೊಂದಾಣಿಕೆ ಇದೆ. ಅವರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಚರ್ಚೆಗಳು ನಡೆದಾಗ, ಪಾಲುದಾರರು ಹೆಚ್ಚಿನ ಅವಕಾಶಗಳನ್ನು ಕೇಳುವುದು ಸಹಜ. ಅದರಲ್ಲಿ ಯಾವುದೇ ತಪ್ಪಿಲ್ಲ. ಇದರರ್ಥ ಮಿತ್ರಪಕ್ಷಗಳು ಪರಸ್ಪರ ವಿರುದ್ಧವಾಗಿವೆ ಎಂಬುದಲ್ಲ. ಇಂಡಿಯಾ ಮೈತ್ರಿಕೂಟದ ಭಿನ್ನಾಭಿಪ್ರಾಯ ಕುರಿತು ಬಿಜೆಪಿ ತಪ್ಪು ಮಾಹಿತಿ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

‘ಬಿಜೆಪಿ ಹತಾಶಗೊಂಡಿದ್ದು, ಹತಾಶ ಪ್ರಯತ್ನ ನಡೆಸುತ್ತಿದೆ. ಅವರು ಏನೂ ಮಾಡುತ್ತಿದ್ದಾರೋ ಅದು ಅವರ ಅಭದ್ರತೆಯನ್ನು ಪ್ರತಿಬಿಂಬಿಸುತ್ತದೆ. ಜನರು, ರೈತರು ಮತ್ತು ಯುವಕರು ಅವರ ಆಡಳಿತದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ಆದ್ದರಿಂದಲೇ ಅವರು ಬೇರೆ ಮಾರ್ಗವಿಲ್ಲದೆ ತಪ್ಪು ಮಾಹಿತಿಯನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ‘ಇಂಡಿಯಾ’ ಮೈತ್ರಿಕೂಟವು ನಿಜವಾದ ಸಂಘಟನೆಯಾಗಿದ್ದು, ಜನರು ಅದನ್ನು ಇಷ್ಟಪಡುತ್ತಾರೆ ಎಂಬುದು ಅವರಿಗೂ (ಬಿಜೆಪಿ) ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.

‘ಜೈ ಜವಾನ್‌’ ಅಭಿಯಾನದ ಕುರಿತು ಮಾತನಾಡಿದ ಅವರು, ರಕ್ಷಣಾ ಪಡೆಗಳಲ್ಲಿನ ನೇಮಕಾತಿಗಾಗಿ ಕಠಿಣ ಮಾನಸಿಕ ಮತ್ತು ದೈಹಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 1.5 ಲಕ್ಷ ಯುವಕರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭಗ್ನಗೊಳಿಸಿದೆ ಎಂದು ಆರೋಪಿಸಿದರು. ‘ಅಗ್ನಿಪಥ ಯೋಜನೆಯನ್ನು ಪರಿಚಯಿಸಿದಾಗ 1.5 ಲಕ್ಷ ಯುವಕ–ಯುವತಿಯರಿಂದ ಕಸಿದುಕೊಂಡಿರುವ ಉದ್ಯೋಗಗಳನ್ನು ಅವರಿಗೆ ಹಿಂದಿರುಗಿಸಬೇಕು. ಸಶಸ್ತ್ರ ಪಡೆಗಳಿಗೆ ಹಿಂದಿನ ನೇಮಕಾತಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸುತ್ತದೆ ಎಂದು ಪುನಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT