ಚೆನ್ನೈ: ಮೇಕೆದಾಟು ಬಳಿ ಅಣೆಕಟ್ಟು ಕುರಿತು ಕರ್ನಾಟಕ ಸರ್ಕಾರ ರಚಿಸಿರುವ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಚರ್ಚೆಗೆ ತೆಗೆದುಕೊಳ್ಳದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯೂಎಂಎ) ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ವಿವಾದಿತ ಯೋಜನೆಗಳಿಗೆ ಸಂಬಂಧಿಸಿದ ಚರ್ಚೆಯನ್ನು ಪ್ರಾಧಿಕಾರವು ಈ ಹಿಂದೆಯೂ ಕೈಬಿಟ್ಟಿದೆ. ಪ್ರಾಧಿಕಾರಕ್ಕೆ ಈ ವಿಷಯ ಚರ್ಚಿಸುವ ಯಾವುದೇ ಅಧಿಕಾರವಿಲ್ಲ ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಪ್ರತಿಪಾದಿಸಿದೆ.
ಇದೇ ತಿಂಗಳ 17ರಂದು ನಡೆಯುವ 16ನೇ ಸಭೆಯ ಕಾರ್ಯಸೂಚಿಗೆ ಮೇಕೆದಾಟು ಅಣೆಕಟ್ಟು ಕುರಿತು ಡಿಪಿಆರ್ ಚರ್ಚೆ ವಿಷಯವನ್ನು ಪ್ರಾಧಿಕಾರ ಸೇರ್ಪಡೆಗೊಳಿಸಿದ ಹಿಂದೆಯೇ ತಮಿಳುನಾಡು ‘ಸುಪ್ರೀಂ’ ಮೆಟ್ಟಿಲೇರಿದೆ.
ಈ ಕುರಿತ ಹೇಳಿಕೆಯಲ್ಲಿ ರಾಜ್ಯದ ಜಲಸಂಪನ್ಮೂಲ ಖಾತೆ ಸಚಿವ ದುರೈ ಮುರುಗನ್, ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ರಾಜ್ಯ ಈಗಾಗಲೇ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದೆ ಎಂದರು.
ಅಣೆಕಟ್ಟು ಯೋಜನೆಗೆ ಕರ್ನಾಟಕ ಸರ್ಕಾರ ₹ 1,000 ಕೋಟಿ ಮಂಜೂರು ಮಾಡಿದ ಹಿಂದೆಯೇ, ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು ಎಂದೂ ತಿಳಿಸಿದ್ದಾರೆ.