ನಾಗಪುರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಹಿಂದುತ್ವವಾದಿ ಮುಖಂಡ ಪ್ರವೀಣ್ ತೊಗಾಡಿಯಾ ವಾಗ್ದಾಳಿ ನಡೆಸಿದ್ದಾರೆ.
‘ಹಿಂದೂ ರಾಷ್ಟ್ರವೆಂದರೆ ಮುಸ್ಲಿಮರಿಗೆ ಸ್ಥಾನವಿಲ್ಲ ಎಂದಲ್ಲ’ ಎಂಬ ಭಾಗವತ್ ಹೇಳಿಕೆಗೆ ತೊಗಾಡಿಯಾ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
‘ಗೋವು ಹಂತಕರು, ಲವ್ ಜಿಹಾದಿಗಳು, ಕಲ್ಲು ತೂರಾಟ ನಡೆಸುವವರು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸುವವರು ಇಲ್ಲದೆ ಹಿಂದುತ್ವ ಇಲ್ಲವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.
‘ಹಿಂದೂ ಸಂಘಟನೆ ಎಂಬ ಕಾರಣಕ್ಕೆ ನಾವು 52 ವರ್ಷಗಳ ಹಿಂದೆ ಆರ್ಎಸ್ಎಸ್ಗೆ ಸೇರಿದ್ದೆವು. ಆದರೆ ಇಂದು ಆರ್ಎಸ್ಎಸ್ ಮುಸ್ಲಿಮರ ಹಿತಾಸಕ್ತಿ ಬಗ್ಗೆ ಕಾಳಜಿ ವಹಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ’ ಎಂದಿದ್ದಾರೆ.
‘ಪ್ರಧಾನಿ ಮೋದಿ ಅವರು ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದಾರೆ ಮತ್ತು ರಾಮ ಮಂದಿರ ನಿರ್ಮಾಣ ಭರವಸೆಯಿಂದ ಹಿಂದೆ ಸರಿಯುತ್ತಿದ್ದಾರೆ’ ಎಂದೂ ತೊಗಾಡಿಯಾ ಆರೋಪಿಸಿದ್ದಾರೆ.