ಹೈದರಾಬಾದ್ (ಪಿಟಿಐ): ‘ಸನಾತನ ಹಿಂದೂ ಧರ್ಮದ ಅಭಿಯಾನವನ್ನು ಟಿಟಿಡಿ ಮಾತ್ರ ಮುನ್ನಡೆಸಬಹುದು ಮತ್ತು ಭವಿಷ್ಯದ ಪೀಳಿಗೆಗೆ ಅದರ ಪಾವಿತ್ರ್ಯವನ್ನು ಉಳಿಸಬಹುದು’ ಎಂದು ವಿವಿಧ ಮಠಾಧೀಶರು ಸರ್ವಾನುಮತದಿಂದ ಇಲ್ಲಿ ಪ್ರತಿಪಾದಿಸಿದರು.
ತಿರುಮಲದ ಆಸ್ಥಾನ ಮಂಟಪದಲ್ಲಿ ಟಿಟಿಡಿಯು ಹಿಂದೂ ಧರ್ಮ ಪ್ರಚಾರ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನದ ಧಾರ್ಮಿಕ ಸಮಾವೇಶದ ಮೊದಲ ದಿನವಾದ ಶನಿವಾರ ವಿವಿಧ ಮಠಾಧೀಶರಿಂದ ಈ ಅಭಿಪ್ರಾಯ ವ್ಯಕ್ತವಾಯಿತು.
ಮೊದಲ ದಿನದ ಸಮಾವೇಶದಲ್ಲಿ 25 ಮಠಾಧೀಶರು ಭಾಗಿಯಾಗಿದ್ದರು. ದೇಶದ ವಿವಿಧ ಭಾಗಗಳಿಂದ ಈ ಸಮಾವೇಶಕ್ಕಾಗಿ ಬಂದಿರುವ ಮಠಾಧೀಶರು, ಧಾರ್ಮಿಕ ಕಾರ್ಯಕ್ರಮಗಳ ಸರಣಿಯ ಮೂಲಕ ಸನಾತನ ಹಿಂದೂ ಧರ್ಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.
‘ಮಠಾಧಿಪತಿಗಳು ಹಾಗೂ ಹಿಂದೂ ಧಾರ್ಮಿಕ ಮುಖ್ಯಸ್ಥರ ಸಲಹೆಯಂತೆ ಮಂಡಳಿಯು ಹಲವು ದಶಕಗಳಿಂದಲೂ ಧಾರ್ಮಿಕ ಚಟುವಟಿಕೆ ನಡೆಸುತ್ತಿದೆ. ಹಿಂದೂ ಧರ್ಮದ ವೈಭವವನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನಿರತವಾಗಿದೆ’ ಎಂದು ಟಿಟಿಡಿ ಅಧ್ಯಕ್ಷ ಭುಮನಾ ಕರುಣಾಕರರೆಡ್ಡಿ ಹೇಳಿದರು.
ವಿಶಾಖಾ ಶಾರದಾ ಪೀಠದ ಸ್ವಾಮಿ ಸ್ವಾತ್ಮಾನಂದೇಂದ್ರ ಸರಸ್ವತಿ ಮಾತನಾಡಿದರು.