ನವದೆಹಲಿ (ಪಿಟಿಐ): ಧರ್ಮದ ಹೆಸರಿನಲ್ಲಿ ಹಿಂಸಾಚಾರ ನಡೆಸುವುದನ್ನು ಈ 21ನೇ ಶತಮಾನದ ಭಾರತ ಸಹಿಸುವುದಿಲ್ಲ. ಇಂತಹ ವಿಭಜಕ ಶಕ್ತಿಗಳ ವಿರುದ್ಧ ಜನರು ಒಂದಾಗದಿದ್ದರೆ ನಮ್ಮ ಮುಂದಿನ ಪೀಳಿಗೆಗಳು ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದರು.
‘ಹರಿಯಾಣದ ಕೆಲವೆಡೆ ನಡೆಯುತ್ತಿರುವುದಾಗಲಿ ಅಥವಾ ಆರ್ಪಿಎಫ್ ಯೋಧ ನಡೆಸಿದ ಕೃತ್ಯವಾಗಲಿ ಭಾರತ ಮಾತೆಯ ಹೃದಯದಲ್ಲಿ ಆಳವಾದ ಗಾಯ ಮಾಡಲಿವೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ದ್ವೇಷ ಬಿಡಿ; ಭಾರತ ಒಗ್ಗೂಡಿಸಿ’ ಎಂದು ಟ್ವೀಟ್ನಲ್ಲಿ ಮನವಿ ಮಾಡಿರುವ ಅವರು, ‘ಹಿಂಸಾಚಾರದ ಘಟನೆಗಳ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಜನರಲ್ಲಿ ದ್ವೇಷದ ವಿಷ ತುಂಬಿ ಅವರನ್ನು ಪರಸ್ಪರ ಬಡಿದಾಡಿಕೊಳ್ಳುವಂತೆ ಮಾಡುವುದು ನಮ್ಮ ಸಂವಿಧಾನದ ಅಣಕ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
‘ದುರ್ಬಲ ಕಾನೂನು–ಸುವ್ಯವಸ್ಥೆ ಹಾಗೂ ದುರ್ಬಲ ಸಾಂವಿಧಾನಿಕ ಸಂಸ್ಥೆಗಳ ಕುರಿತು ಹಿಂಸಾಚಾರದ ಘಟನೆಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಅಧಿಕಾರ ದಾಹದಿಂದಾಗಿ ದ್ವೇಷ ಹರಡುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿಯೇ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ’ ಎಂದು ಖರ್ಗೆ ಹೇಳಿದ್ದಾರೆ.
ಹರಿಯಾಣದ ನೂಹ್ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೋಭಾಯಾತ್ರೆ ತಡೆಯುವ ಪ್ರಯತ್ನ ನಡೆಯುತ್ತಿದ್ದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಮಂಗಳವಾರ ಗುರುಗ್ರಾಮದ ಸೆಕ್ಷರ್ 57ರಲ್ಲಿ ಮಸೀದಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಇಮಾಮ್ ಒಬ್ಬರು ಮೃತಪಟ್ಟಿದ್ದಾರೆ.