ಭೋಪಾಲ್: ಮಾರ್ಚ್ 16ರ ಸೋಮವಾರ ಮಧ್ಯಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಂದೇ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕಮಲ್ನಾಥ್ಗೆ ರಾಜ್ಯಪಾಲ ಲಾಲ್ಜಿ ಟಂಡನ್ ಸೂಚಿಸಿದ್ದಾರೆ.
ಇನ್ನೊಂದೆಡೆ, ‘ಈ ಸಂಬಂಧ ಸೋಮವಾರವೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಸಭಾಧ್ಯಕ್ಷ ಎನ್.ಪಿ.ಪ್ರಜಾಪತಿ ಭಾನುವಾರ ಹೇಳಿದ್ದಾರೆ. ಹೀಗಾಗಿ ಕಮಲ್ನಾಥ್ ನೇತೃತ್ವದ ಸರ್ಕಾರದ ಅಳಿವು–ಉಳಿವು ಈಗ ಕುತೂಹಲಕರ ಘಟ್ಟ ತಲುಪಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಂತೆಯೇ ಅವರಿಗೆ ನಿಷ್ಠರಾದ 22 ಶಾಸಕರೂ ಪಕ್ಷವನ್ನು ತೊರೆದರು. ಈ ಪೈಕಿ ಆರು ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷ ಪ್ರಜಾಪತಿ ಅಂಗೀಕರಿಸಿದ್ದಾರೆ. ಆದ್ದರಿಂದ ವಿಧಾನಸಭೆಯ ಈಗಿನ ಸಂಖ್ಯಾಬಲ 222ಕ್ಕೆ ಕುಸಿದಿದೆ. ಹೀಗಾಗಿ ಸರಳ ಬಹುಮತಕ್ಕೆ ಅಗತ್ಯವಿರುವ ಶಾಸಕರ ಸಂಖ್ಯೆ 112.
ಕಾಂಗ್ರೆಸ್ ಶಾಸಕರ ಸಂಖ್ಯೆ 108 ಇದ್ದು, ಮೈತ್ರಿ ಪಕ್ಷಗಳ 7 ಶಾಸಕರ ಬೆಂಬಲದೊಂದಿಗೆ ಸರಳ ಬಹುಮತ ಹೊಂದಿದೆ. ಬಿಜೆಪಿ ಸದಸ್ಯರ ಸಂಖ್ಯೆ 107 ಇದೆ.