ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವೆ ಉಮಾ ಭಾರತಿ ವಿರುದ್ಧ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
ಪ್ರಮುಖ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದ್ದ ಮಹತ್ವದ ದಾಖಲೆಯನ್ನು ಅಳಿಸಿಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚೌಹಾಣ್, ಉಮಾ ಭಾರತಿ ಮಾತ್ರವಲ್ಲದೆ ಇಂದೋರ್ ಅಪರಾಧ ದಳದ ಅಧಿಕಾರಿಗಳೂ ಸೇರಿದಂತೆ ಒಟ್ಟು 18 ಮಂದಿಯನ್ನು ಹೆಸರಿಸಲಾಗಿದೆ.
ಹಗರಣದ ಬಗ್ಗೆ ಸಿಬಿಐಗೂ ಮುನ್ನ ತನಿಖೆ ನಡೆಸಿದ್ದ ಇಂದೋರ್ ಅಪರಾಧ ದಳದ ಅಧಿಕಾರಿಗಳು ಪ್ರಮುಖ ಆರೋಪಿ ನಿತಿನ್ ಮಹೀಂದ್ರಾ ಬಳಿಯಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಹಾರ್ಡ್ ಡಿಸ್ಕ್ನಲ್ಲಿದ್ದ ಎಕ್ಸೆಲ್ ಶೀಟ್ನಲ್ಲಿ ಕೆಲವು ಅಂಶಗಳನ್ನು ಅಳಿಸಿಹಾಕಿದ್ದಾರೆ. ಚೌಹಾಣ್ ಅವರನ್ನು ಆರೋಪಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕೃತ್ಯ ಎಸಲಾಗಿದೆ ಎಂದು ದಿಗ್ವಿಜಯ್ ಪರ ಈ ಹಿಂದೆ ವಾದ ಮಂಡಿಸಿದ್ದ ವಕೀಲ ಅಜಯ್ ಗುಪ್ತಾ ಆರೋಪಿಸಿದ್ದಾರೆ. ಆದರೆ, ಈ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಿಬಿಐ ಹೇಳಿದೆ.