ಪಣಜಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರಕ್ಕೆ(ಬಿಜೆಪಿ) ಹಿಂಜರಿಕೆ ಏಕೆ? ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಪ್ರಶ್ನಿಸಿದ್ದಾರೆ.
ದಕ್ಷಿಣ ಗೋವಾದ ಬೆನೌಲಿಮ್ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 'ಸಂಸತ್ತಿನಲ್ಲಿ ಇವಿಎಂ ಬಗ್ಗೆ ಯಾವ ಪಕ್ಷಗಳು ಮಾತನಾಡಿದರೂ ಬಿಜೆಪಿ ಮಾತ್ರ ಸಮರ್ಥಿಸುವುದು ಯಾಕೆ? ಇದರರ್ಥ ಏನೋ ಇದೆ. ಅವರಿಗೆ ನಿಜವಾಗಿಯೂ ಮೋದಿ ಅಲೆಯ ಮೇಲೆ ವಿಶ್ವಾಸವಿದ್ದರೆ, ಬ್ಯಾಲೆಟ್ ಪೇಪರ್ಗಳ ಮೂಲಕ ಚುನಾವಣೆ ನಡೆಸಲಿ' ಎಂದು ಅವರು ಸವಾಲು ಹಾಕಿದರು.
ಇವಿಎಂಗಳ ಕಾರ್ಯದಕ್ಷತೆ ಬಗ್ಗೆ ಅನುಮಾನ ಮೂಡಿದೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ, ಸಾಮಾನ್ಯ ಜನರು ಕೂಡ ಹೇಳುತ್ತಿದ್ದಾರೆ. ಇದೆಲ್ಲವನ್ನೂ ದೇವರು ಗಮನಿಸುತ್ತಿದ್ದಾನೆ ಎಂದು ಮಾನ್ ಹೇಳಿದರು.
ಎಎಪಿ ಯಾವುದೇ ರಾಜಕೀಯ ಗಿಮಿಕ್ ಮಾಡುತ್ತಿಲ್ಲ, ಬದಲಿಗೆ ಜನೋಪಕಾರಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಪಕ್ಷದ ‘ಗ್ಯಾರಂಟಿ’ಯನ್ನು ಬೇರೆಯವರು ಕದ್ದಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಎಎಪಿ ನಾಯಕರು ಯಾವುದೇ ಅಕ್ರಮಗಳನ್ನು ಮಾಡಿಲ್ಲ, ಆದರೂ ಬಿಜೆಪಿ ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಮ್ಮ ನಾಯಕರನ್ನು ಬಂಧಿಸಲು ಮುಂದಾಗಿದೆ ಎಂದು ಅವರು ದೂರಿದರು.
ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಎಪಿಯ ರಾಜ್ಯಸಭಾ ಸದಸ್ಯ ಸಂದೀಪ್ ಪಾಠಕ್, ಎಎಪಿಯ ಗೋವಾ ಘಟಕದ ಅಧ್ಯಕ್ಷ ಅಮಿತ್ ಪಾಲೇಕರ್, ಶಾಸಕ ವೆಂಜಿ ವಿಗಾಸ್ವ್ ಇದ್ದರು.