ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟವು 'ತೀವ್ರ' ಕಳಪೆ ಇರುವ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿ ನಿಷೇಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಬುಧವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಐದು ದಿನಗಳವರೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 400ಗಿಂತಲೂ ಹೆಚ್ಚಿರುವ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸರ್ಕಾರ ನಿಷೇಧಿಸಲಿದೆ ಎಂದು ಹೇಳಿದ್ದಾರೆ.
ಮುಂದಿನ ಕೆಲ ದಿನಗಳ ಕಾಲ ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಭೀತಿಯಿದೆ. ಹಾಗಾಗಿ ಮುಂದಿನ ಎರಡು ವಾರಗಳ ಕಾಲ ನಿರ್ಣಾಯಕವೆನಿಸಲಿದೆ ಎಂದು ಅವರು ಹೇಳಿದ್ದಾರೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಾಯುಮಾಲಿನ್ಯ ನಿಯಂತ್ರಣ ಯೋಜನೆಯ ಅಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹೊರತಾಗಿಯೂ ನಗರದಲ್ಲಿ ವಾಯು ಮಾಲಿನ್ಯ ಕಳಪೆ ಮಟ್ಟದಲ್ಲಿದೆ.
ವಾಯು ಗುಣಮಟ್ಟ ಮಾಪನ ಸೂಚ್ಯಂಕದ ಅನುಸಾರ, 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತಿ ಕಳಪೆ’, ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.