ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್ ಕುಮಾರ್, ಹಿಂದಿನ ಮೈತ್ರಿಕೂಟವನ್ನು ತೊರೆದು ಹೊಸ ಮೈತ್ರಿ ಮೂಲಕ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ.
‘ಇಂದು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ತಿಳಿಸಿದ್ದೇನೆ’ಎಂದು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಹೇಳಿದ್ದಾರೆ.
ಮಹಾಘಟಬಂಧನ ಮತ್ತು ಇಂಡಿಯಾ ಬಣದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ ಈ ಪರಿಸ್ಥಿತಿ ಬಂದಿದೆ. ಎಲ್ಲರಿಂದಲೂ ಅಭಿಪ್ರಾಯಗಳನ್ನು ಪಡೆದಿದ್ದೇನೆ. ಆ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಇಂದು ಸರ್ಕಾರ ವಿಸರ್ಜನೆಯಾಗಿದೆ ಎಂದು ರಾಜಭವನದ ಹೊರಗೆ ನಿತೀಶ್ ಕುಮಾರ್ ಸುದ್ದಿಗಾರರರಿಗೆ ತಿಳಿಸಿದ್ದಾರೆ.
'ಹಿಂದಿನ ಮೈತ್ರಿಕೂಟದಲ್ಲಿ ಕೆಲಸ ಮಾಡಲು ನನಗೆ ಬಹಳ ಕಷ್ಟವಾಗುತ್ತಿತ್ತು. ಪಕ್ಷದ ಸದಸ್ಯರಿಗೆ ಈ ಬಗ್ಗೆ ವಿವರಿಸಿದಾಗ, ರಾಜೀನಾಮೆ ನೀಡುವಂತೆ ಸಲಹೆ ನೀಡಿದರು. ಹಾಗಾಗಿ, ರಾಜೀನಾಮೆ ನೀಡಿದೆ’ ಎಂದಿದ್ದಾರೆ.
‘ಇಂಡಿಯಾ ಮೈತ್ರಿಕೂಟ ಸೇರಿಕೊಂಡಿದ್ದೆ. ಆದರೆ, ಅಲ್ಲಿ ಯಾವ ಕೆಲಸವೂ ಆಗುತ್ತಿರಲಿಲ್ಲ. ಇಂಡಿಯಾ ಬಣ ತೊರೆದಿದ್ದೇನೆ’ ಎಂದು ಹೇಳಿದ್ದಾರೆ
ನಿತೀಶ್ ಕುಮಾರ್ ರಾಜೀನಾಮೆಯಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಉದ್ದೇಶ ಹೊಂದಿರುವ ಇಂಡಿಯಾ ಬಣಕ್ಕೆ ಹಿನ್ನಡೆಯಾಗಿದೆ.