ಮಲಪ್ಪುರ (ಕೇರಳ): ಜನವರಿ 2ರಂದು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ ಹಿಂದೂಪರ ಸಂಘಟನೆಗಳಿಂದ ಜೀವಬೆದರಿಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವಾಲಯ ಪ್ರವೇಶಿಸಲು10ರಿಂದ 50 ವರ್ಷದ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ದೇವಾಲಯ ಪ್ರವೇಶಿಸಲು ಹಲವು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಮಹಿಳೆಯರು ವಿಫಲ ಪ್ರಯತ್ನ ನಡೆಸಿದ್ದರು.
ಆದರೆ ಜನವರಿ 2ರಂದು ಕನಕದುರ್ಗ (44) ಮತ್ತು ಬಿಂದು (42) ದೇವಾಲಯವನ್ನು ಯಶಸ್ವಿಯಾಗಿ ಪ್ರವೇಶಿಸಿದ್ದರು. ಆನಂತರ ಅವರಿಗೆ ಜೀವ ಬೆದರಿಕೆಗಳು ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರ್ಎಸ್ಎಸ್ ಸ್ವಯಂಸೇವಕರ ಬಂಧನ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ್ದರ ವಿರುದ್ಧ ಜನವರಿ 3ರಂದು ನಡೆದಿದ್ದ ಬಂದ್ ವೇಳೆ ಪೊಲೀಸ್ ಠಾಣೆಯ ಮೇಲೆ ಬಾಂಬ್ ಎಸೆದಿದ್ದ ಆರ್ಎಸ್ಎಸ್ ಸ್ವಯಂಸೇವಕರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್ಎಸ್ಎಸ್ನ ತಿರುವನಂತಪುರ ಜಿಲ್ಲಾ ಘಟಕದ ಸ್ವಯಂಸೇವಕ ಪ್ರವೀಣ್ ಮತ್ತು ಸಾಮಾನ್ಯ ಸ್ವಯಂಸೇವಕ ಶ್ರೀಜಿತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.