ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ದೂರು ನೀಡಲು ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಚುನಾವಣಾ ಆಯೋಗದ ತಂಡವನ್ನು ಭೇಟಿ ಮಾಡಿವೆ.
ಆಂಧ್ರಪ್ರದೇಶದಲ್ಲಿ ನಕಲಿ ಮತದಾರರ ನೋಂದಣಿ ನಡೆಯುತ್ತಿದೆ ಎಂದು ಆರೋಪಿಸಿರುವ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ನಾರಾ ಲೋಕೇಶ್ ಮತ್ತು ಇತರರ ವಿರುದ್ಧ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ಸಲ್ಲಿಸಿದೆ.
ರಾಜ್ಯಕ್ಕೆ ಭೇಟಿ ನೀಡಿರುವ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮತ್ತು ಇತರೆ ಅಧಿಕಾರಿಗಳನ್ನು ಭೇಟಿ ಮಾಡಿರುವ ರಾಜ್ಯಸಭೆ ಸದಸ್ಯ ವಿ. ವಿಜಯಸಾಯಿ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ನಿಯೋಗವು, ರಾಜ್ಯದಲ್ಲಿ ನೋಂದಣಿಯಾಗಿರುವ ನಕಲಿ ಮತದಾರರ ಹೆಸರುಗಳನ್ನು ಮತದಾನ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದೆ.
ಚುನಾವಣಾ ಆಯೋಗದ ಅಧಿಕಾರಿಗಳ ಭೇಟಿ ಬಳಿಕ ಮಾತನಾಡಿದ ಸಂಸದ ರೆಡ್ಡಿ, ‘ತೆಲಂಗಾಣದಲ್ಲಿ ಚುನಾವಣೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ತೆಲಂಗಾಣದ ಜನರನ್ನು ಕರೆತಂದು ಆಂಧ್ರಪ್ರದೇಶದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಕೆಲಸವನ್ನು ಟಿಡಿಪಿ ಮಾಡಿದೆ. ಇದು ಅಕ್ರಮ’ ಎಂದು ಆರೋಪಿಸಿದರು.