ಹೈದರಾಬಾದ್: ಸೀಮಾಂಧ್ರ ಶಾಸಕರ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೂ ಆಂಧ್ರಪ್ರದೇಶ ಪುನರ್ರಚನೆ ಮಸೂದೆ 2013 ಆಂಧ್ರ ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾಯಿತು.
ಮಸೂದೆ ಮಂಡನೆಯಾಗುತ್ತಿದ್ದಂತೆ ತೀವ್ರ ಗದ್ದಲ ಉಂಟಾಗಿ ಅನೇಕ ನಾಟಕೀಯ ಬೆಳವಣಿಗೆಗಳಿಗೆ ವಿಧಾನಸಭೆ ಸಾಕ್ಷಿಯಾಯಿತು.
ಆಂಧ್ರ ವಿಭಜನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದ ಮುಖ್ಯಮಂತ್ರಿ ಎನ್.ಕಿರಣ್ಕುಮಾರ್ ರೆಡ್ಡಿ ಅವರು ಅನಾರೋಗ್ಯದ ಕಾರಣ ಸದನಕ್ಕೆ ಗೈರು ಹಾಜರಾಗಿದ್ದರು.
ರೆಡ್ಡಿ ಅನುಪಸ್ಥಿತಿಯಲ್ಲಿ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಸೀಮಾಂಧ್ರ ಶಾಸಕರು ವಿರೋಧ ಸೂಚಿಸಿದರು. ಅಲ್ಲದೇ ಘೋಷಣೆಗಳನ್ನು ಕೂಗುತ್ತ ಸ್ಪೀಕರ್ ಪೀಠದ ಬಳಿ ಜಮಾಯಿಸಿದರು.
ಶಾಸಕರ ಈ ವರ್ತನೆಯನ್ನು ತೆಲಂಗಾಣ ಭಾಗದ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದರು. ಶಾಸಕರ ವಾಗ್ವಾದ, ಆರೋಪ ಪ್ರತ್ಯಾರೋಪದಿಂದ ವಿಧಾನಸಭೆ ಅಕ್ಷರಶಃ ಗೊಂದಲದ ಗೂಡಾಗಿತ್ತು. ತೆಲಗುದೇಶಂಗೆ ಸೇರಿದ ಸೀಮಾಂಧ್ರ ಶಾಸಕರು ಮಸೂದೆಯ ಪ್ರತಿಗಳನ್ನು ಹರಿದು ಹಾಕಿದರೆ, ಸೀಮಾಂಧ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕರು, ಸದನದ ಹೊರಗೆ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಸೂಚಿಸಿದರು. ಈ ಕ್ರಮವನ್ನು ತೆಲಂಗಾಣ ಭಾಗದ ಶಾಸಕರು ತೀವ್ರವಾಗಿ ಖಂಡಿಸಿದರು.
ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಇ. ರಾಜೇಂದ್ರ ‘ಇದು ತೆಲಂಗಾಣ ಜನತೆಗೆ ಮಾಡಿದ ಅವಮಾನ. ಅವರು ಕೂಡಲೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ಮಸೂದೆಯ ಪ್ರಮುಖ ಅಂಶಗಳು
*ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ತೆಲಂಗಾಣ ರಾಜ್ಯ 119 ವಿಧಾನಸಭೆ ಸದಸ್ಯರು, 40 ವಿಧಾನ ಪರಿಷತ್ ಸದಸ್ಯರು, 17 ಲೋಕಸಭೆ ಮತ್ತು 7 ರಾಜ್ಯಸಭೆ ಸದಸ್ಯರನ್ನು ಒಳಗೊಂಡಿರಲಿದೆ.