ಗಾಜಿಯಾಬಾದ್ (ಪಿಟಿಐ): ಪುತ್ರಿ ಆರುಷಿ ಹಾಗೂ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದಂತವೈದ್ಯ ದಂಪತಿ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರ ಅನುಮತಿ ಇಲ್ಲದೆ ಆರುಷಿ ಪ್ರಕರಣ ಕುರಿತು ಸಿನಿಮಾ ತಯಾರಿಸುವುಗಾಗಲಿ ಇಲ್ಲವೇ, ಪುಸ್ತಕ ಪ್ರಕಟಿಸುವುದಾಗಲಿ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾನುವಾರ ತಲ್ವಾರ್ ಪರ ವಕೀಲರು ಹೇಳಿದರು.
ಪ್ರಕರಣ ಕುರಿತಂತೆ ಮಾಧ್ಯಮಗಳಲ್ಲಿ ಬಂದ ವರದಿಗಳಿಂದ ತಲ್ವಾರ್ ದಂಪತಿ ಬೇಸರಗೊಂಡಿದ್ದಾರೆ. ಆರುಷಿ ಪ್ರಕರಣ ಕುರಿತಂತೆ ಚಿತ್ರ ನಿರ್ಮಿಸಲು ಯಾವುದೇ ಹಾಲಿವುಡ್, ಬಾಲಿವುಡ್ ಚಿತ್ರ ನಿರ್ದೇಶಕರಿಗೆ ಅನುಮತಿ ನೀಡುವುದಿಲ್ಲ ಎಂದು ತಲ್ವಾರ್ ದಂಪತಿ ವರ ವಕೀಲ ಮನೋಜ್ ಸಿಸೋಡಿಯಾ ತಿಳಿಸಿದರು.
`ಆರುಷಿ ಪ್ರಕರಣ ಕುರಿತಂತೆ ಕೆಲ ಅಂತರರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದ ಚಿತ್ರ ನಿರ್ದೇಶಕರು ಹಾಗೂ ಬರಹಗಾರರು ಚಿತ್ರ ನಿರ್ಮಿಸಲು, ಪುಸ್ತಕ ಬರೆಯಲು ಆಸಕ್ತಿ ತೋರಿಸಿರುವುದು ಮಾಧ್ಯಮಗಳ ವರದಿಯಿಂದ ನಮ್ಮ ಗಮನಕ್ಕೆ ಬಂದಿದೆ' ಎಂದು ಮನೋಜ್ ಹೇಳಿದರು.