ನೀಮಚ್ (ಮಧ್ಯಪ್ರದೇಶ) (ಪಿಟಿಐ): ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಬಾಂಬ್ ತಯಾರಿಕೆ ತರಬೇತಿ ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಗುರುವಾರ ಆರೋಪಿಸಿದರು.
ರಾಜ್ಯದ ಹಲವಾರು ಸ್ಥಳಗಳಲ್ಲಿ ಈ ಹಿಂದೆ ನಡೆದ ಘಟನೆಗಳ ಆಧಾರ ಮೇಲೆ ತಾವು ಈ ಆರೋಪ ಮಾಡಿರುವುದಾಗಿ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
1992ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ಇದ್ದ ವೇಳೆ ಆರ್ಎಸ್ಎಸ್ ಕಚೇರಿ ಸೇವಾ ಭಾರತಿ ಬಳಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ನಂತರ 1993ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈ ಪ್ರಕರಣವನ್ನು ಮರುವಿಚಾರಣೆ ನಡೆಸಿ ಘಟನೆಗೆ ಸಂಬಂಧಿಸಿದಂತೆ ಸಂಘದ ನಂಟು ಹೊಂದಿದ್ದ ಖರ್ಗಾಂವ್ನ ಓರ್ವ ಪ್ರಿನ್ಸಿಪಾಲ್ನನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
2004ರಲ್ಲಿ ಮೊವ್ನಲ್ಲಿ ಜರುಗಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳು ಆರ್ಎಸ್ಎಸ್ ಬಾಂಬ್ ತಯಾರಿಕೆ ತರಬೇತಿ ನೀಡಿತ್ತು ಎಂದು ಹೇಳಿಕೆ ನೀಡಿದ್ದರು ಎಂದು ಸಿಂಗ್ ತಿಳಿಸಿದರು.