ನವದೆಹಲಿ (ಪಿಟಿಐ): ಚುನಾವಣೆಯಲ್ಲಿ ತೋರಿದ ಅತ್ಯಂತ ಕಳಪೆ ಸಾಧನೆಯಿಂದ ಆಘಾತಕ್ಕೊಳಗಾಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೋಮವಾರ ಇಲ್ಲಿ ನಡೆಯಲಿದೆ.
ಪಕ್ಷವನ್ನು ಪುನರುಜ್ಜೀವನಗೊಳಿಸುವುದಕ್ಕೆ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ಸಭೆಯಲ್ಲಿ ಕೇಳಿಬರುವ ಸಾಧ್ಯತೆ ಎಂಬ ವದಂತಿ ಇದೆ.
ಸೋಲಿಗೆ ರಾಹುಲ್ ಗಾಂಧಿ ಅವರತ್ತ ಯಾರೊಬ್ಬರೂ ಬೆಟ್ಟು ಮಾಡದಿದ್ದರೂ, ಅವರ ಸಲಹೆಗಾರರಾಗಿದ್ದ ಜೈರಾಂ ರಮೇಶ್, ಮೋಹನ್ ಗೋಪಾಲ್, ಮಧುಸೂದನ್ ಮಿಸ್ತ್ರಿ ಮತ್ತು ಮೋಹನ್ ಪ್ರಕಾಶ್ ಅವರ ಪಾತ್ರವನ್ನು ಪ್ರಶ್ನಿಸುವ ಸಾಧ್ಯತೆ ಹೆಚ್ಚಾಗಿದೆ.
ಸೋಲಿಗೆ ಕಾರಣಗಳ ಶೋಧನೆಯಲ್ಲಿ ಕಾಂಗ್ರೆಸ್ ತೊಡಗಿರುವಂತೆಯೇ ಪಕ್ಷದ ಹಿರಿಯ ಮುಖಂಡ ಕಮಲ್ನಾಥ್, ‘ಪೋಷಕ ರಾಜಕಾರಣ’ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಇನ್ನಷ್ಟು ನಿರ್ದಾಕ್ಷಿಣ್ಯರಾಗಿರಬಹುದಿತ್ತು ಎಂದಿರುವ ಕಮಲ್ನಾಥ್, ಪಕ್ಷದಲ್ಲಿ ಸಂವಹನದ ಕೊರತೆ ಇತ್ತು ಎಂದು ಹೇಳಿದ್ದಾರೆ. ಕಾರ್ಯಕರ್ತರೊಂದಿಗಿನ ಸಂವಹನ ಕೊರತೆ ಬಗ್ಗೆ ಸಿಂಗ್ ಸಂಪುಟದ ಹಲವು ಸಚಿವರು ಸಭೆಯಲ್ಲಿ ತೀಕ್ಷ್ಣ ಪ್ರಶ್ನೆಗಳನ್ನು ಎದುರಿಸುವ ಸಂಭವವಿದೆ.
ಚುನಾವಣೆಯಲ್ಲಿ ಹಲವು ಸಚಿವರು ಹೀನಾಯವಾಗಿ ಸೋತಿರುವುದಕ್ಕೆ, ಆ ಸಚಿವರ ‘ಅಹಂಕಾರ’ ಮತ್ತು ಕಾರ್ಯಕರ್ತರೊಂದಿಗೆ ಸೂಕ್ತ ಸಂಪರ್ಕ ಹೊಂದಿರದಿದ್ದುದೇ ಕಾರಣ ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವ ಸಾಧ್ಯತೆಯನ್ನು ಪಕ್ಷದ ಮೂಲಗಳು ಈಗಾಗಲೇ ತಳ್ಳಿಹಾಕಿದ್ದರೂ, ಪಕ್ಷದ ಚುನಾವಣಾ ಪ್ರಚಾರ ಮತ್ತು ಮೈತ್ರಿ ತಂತ್ರಗಾರಿಕೆ ಬಗ್ಗೆ ಸಭೆಯಲ್ಲಿ ತೀಕ್ಷ್ಣ ಟೀಕೆಗಳು ವ್ಯಕ್ತವಾಗುವ ನಿರೀಕ್ಷೆ ಇದೆ.
ರಾಹುಲ್ ಕಾರ್ಯ ವೈಖರಿ ಬಗ್ಗೆ ಪ್ರಶ್ನೆಗಳು ಕೇಳಿಬಂದಿದೆಯಾದರೂ, ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಒಬ್ಬರಾದರೂ ಆ ಪ್ರಶ್ನೆಗಳನ್ನು ಕೇಳುವ ಬಗ್ಗೆ ಸಂಶಯ ಇದೆ.