ನವದೆಹಲಿ (ಪಿಟಿಐ/ಐಎಎನ್ಎಸ್): ಗುಲ್ಬರ್ಗ - ಸೊಲ್ಲಾಪುರ ಪ್ಯಾಸೆಂಜರ್ ರೈಲಿಗೆ ಬೆಂಕಿ ತಗುಲಿದ ಪರಿಣಾಮವಾಗಿ ಇಬ್ಬರು ಸುಟ್ಟು ಕರಕಲಾಗಿ ಇತರ 7 ಮಂದಿ ಸುಟ್ಟ ಗಾಯಗಳಿಗೆ ಒಳಗಾದ ಘಟನೆ ಗುಲ್ಬರ್ಗ ರೈಲು ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿತು.
ರೈಲು ಗುಲ್ಬರ್ಗ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಮಯದಲ್ಲಿ ಏಕಾಏಕಿ ದ್ವಿತೀಯ ದರ್ಜೆ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ಗಾಬರಿಗೆ ಒಳಗಾದ ಪ್ರಯಾಣಿಕರು ಬೋಗಿಯಿಂದ ನೆಗೆದರು. ಹೊರಬರಲಾಗದೆ ಬೋಗಿಯಲ್ಲೆ ಸಿಕ್ಕಿಕೊಂಡ ಪ್ರಯಾಣಿಕರಲ್ಲಿ ಇಬ್ಬರು ಸುಟ್ಟು ಕರಲಾದರೆ ಇತರೆ 6 ಮಂದಿಗೆ ಸುಟ್ಟ ಗಾಯಗಳಾದವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು ಒಂದು ಗಂಟೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ರೈಲ್ವೆ ಮೂಲಗಳು ತಿಳಿಸಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೊಲ್ಲಾಪುರದಿಂದ ಹೈದರಾಬಾದ್ ಗೆ ಹೊರಟಿದ್ದ ರೈಲುಗಾಡಿ ರಾತ್ರಿ 12.30ಕ್ಕೆ ಇಲ್ಲಿಗೆ ಆಗಮಿಸಿತ್ತು. ದುರಂತ ಸಂಭವಿಸುವಾಗ ಬೋಗಿಯಲ್ಲಿ 15 ಮಂದಿ ಪ್ರಯಾಣಿಕರಿದ್ದರು. 6 ಮಂದಿ ಬೋಗಿಯಿಂದ ಹೊರಕ್ಕೆ ಹಾರಿ ಪಾರಾದರು.
ಮೃತರ ಕುಟುಂಬ ಸದಸ್ಯರಿಗೆ ರೈಲ್ವೆ ಇಲಾಖೆ ಒಂದು ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ದುರ್ಘಟನೆಗೆ ಸಂಬಂಧಪಟ್ಟಂತೆ ತನಿಖೆಗೆ ಆದೇಶಿಸಿದೆ.