ಅಹಮದಾಬಾದ್: ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ನ ಮಾಜಿ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ವಾಗ್ದಾಳಿ ನಡೆಸಿದ್ದಾರೆ.
‘ಗಡಿ ಕಾಯುವ ಸೈನಿಕರು ಸುರಕ್ಷಿತವಾಗಿಲ್ಲ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಮತ್ತು ನಮ್ಮ ಹೆಣ್ಣು ಮಕ್ಕಳು ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿಲ್ಲ. ಇಷ್ಟೆಲ್ಲ ಆದರೂ ಪ್ರಧಾನಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ’ ಎಂದು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ, ಸ್ವೀಡನ್ ಮತ್ತು ಇಂಗ್ಲೆಂಡ್ಗೆ ಐದು ದಿನಗಳ ಪ್ರವಾಸಕ್ಕೆ ಸೋಮವಾರ ತೆರಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ, ಮಂಗಳವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.
‘ತೊಗಾಡಿಯಾ ಅವರನ್ನು ಬೆಂಬಲಿಸಿ ದೇಶದಾದ್ಯಂತ ಜಿಲ್ಲಾ ಮಟ್ಟದ ಸುಮಾರು 5 ಸಾವಿರ ಕಾರ್ಯಕರ್ತರು ವಿಎಚ್ಪಿ ತೊರೆದಿದ್ದಾರೆ’ ಎಂದು ವಿಎಚ್ಪಿಯ ಗುಜರಾತ್ ಘಟಕದ ವಕ್ತಾರ ಜಯ್ ಷಾ ತಿಳಿಸಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಇದ್ದ ಅಂಶಗಳನ್ನು ಈಗ ತೊಗಾಡಿಯಾ ಅವರು ಕೇಂದ್ರಕ್ಕೆ ನೆನಪಿಸುತ್ತಿದ್ದಾರೆ, ಇದರಲ್ಲಿ ಹೊಸತೇನೂ ಇಲ್ಲ ಎಂದರು.