ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಬಾರಿಯೂ ಗೆ‌ಹ್ಲೋಟ್‌ ‘ಜಾದೂ’

Last Updated 14 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಜೈಪುರ: ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಯುವ ನಾಯಕ ಸಚಿನ್‌ ಪೈಲಟ್‌ ತೀವ್ರ ಪೈಪೋಟಿಯ ಮಧ್ಯೆಯೂ 67 ವರ್ಷದ ಅಶೋಕ್‌ ಗೆಹ್ಲೋಟ್‌ ಮೂರನೇ ಬಾರಿ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಧಿ–ನೆಹರೂ ಕುಟುಂಬದ ನಿಷ್ಠಾವಂತ ಎಂದು ಗುರುತಿಸಿಕೊಂಡಿರುವ ಗೆಹ್ಲೋಟ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಿಂದೆಯೂ ಸುಲಭದ ತುತ್ತಾಗಿರಲಿಲ್ಲ. ಪ್ರತಿ ಬಾರಿಯೂ ಒಂದಿಲ್ಲ, ಒಂದು ಸವಾಲನ್ನು ಎದುರಿಸಿದ್ದಾರೆ.

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಸರ್ಕಾರ ರಚಿಸಲು ಮುಂದಾದಾಗಲೇ ಅಶೋಕ್‌ ಗೆಹ್ಲೋಟ್‌ ಜತೆ ಸಚಿನ್‌ ಪೈಲಟ್‌ ಹೆಸರೂ ಕೇಳಿ ಬಂದಿತ್ತು.

ಕಾಂಗ್ರೆಸ್‌ ಸ್ವತಂತ್ರವಾಗಿ ಸರ್ಕಾರ ರಚಿಸುವುದು ಅಸಾಧ್ಯ ಎಂದು ಗೊತ್ತಾದ ತಕ್ಷಣ ಗೆಹ್ಲೋಟ್‌ ಅವರು ಪಕ್ಷೇತರರು, ಬಂಡಾಯ ಅಭ್ಯರ್ಥಿಗಳ ಸಂಪರ್ಕದಲ್ಲಿದ್ದರು.

ಆದರೆ, ಮಾಲಿ ಜನಾಂಗಕ್ಕೆ ಸೆರಿದ ಗೆಹ್ಲೋಟ್‌ ಮುಖ್ಯಮಂತ್ರಿಯಾಗಲು ರಾಜಸ್ಥಾನದ ಪ್ರಬಲ ಜಾಟ್‌ ಸಮುದಾಯದ ನಾಯಕರು ಬಹಿರಂಗವಾಗಿ ಅಡ್ಡಗಾಲು ಹಾಕಿದರು. ಜತೆಗೆ ಈ ಬಾರಿ ಸಚಿನ್‌ ಪೈಲಟ್‌ ಅವರಿಗೆ ಅವಕಾಶ ನೀಡುವಂತೆ ಗುಜ್ಜರ್‌ ಸಮುದಾಯದವರು ಕೂಡ ರಸ್ತೆಗಿಳಿದಿದ್ದರು.

1998ರಲ್ಲಿ ಮೊದಲ ಬಾರಿಗೆ ಗೆಹ್ಲೋಟ್‌ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2008ರಲ್ಲಿ ಎರಡನೇ ಬಾರಿಗೆ ಆ ಮತ್ತೊಮ್ಮೆ ಅವರನ್ನು ಅದೃಷ್ಟ ಹುಡುಕಿಕೊಂಡು ಬಂದಿತ್ತು. ಈಗ 2018ರಲ್ಲಿ ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರುತ್ತಿದ್ದಾರೆ.

ವಿಜ್ಞಾನ ಮತ್ತು ಕಾನೂನು ಪದವೀಧರರಾದ ಗೆಹ್ಲೋಟ್‌ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಜಾದೂಗಾರ

ಗೆಹ್ಲೋಟ್‌ ಜಾದೂಗಾರರರ ಕುಟುಂಬದಿಂದ ಬಂದವರು. ಬಾಲ್ಯದಲ್ಲಿ ತಂದೆ ಲಚಮನ್‌ ಸಿಂಗ್‌ ಜತೆ ಊರೂರು ತಿರುಗಿ ಜಾದೂ ಪ್ರದರ್ಶನ ನೀಡುತ್ತಿದ್ದರು. ಇದರಿಂದಾಗಿಯೇ ರಾಜಕೀಯ ವಿರೋಧಿಗಳು ಅವರನ್ನು‘ಗಿಲ್ಲಿ ಬಿಲ್ಲಿ’ ಎಂದು ಛೇಡಿಸುತ್ತಾರೆ.

ಪೂರ್ವ ಬಂಗಾಳ ನಿರಾಶ್ರಿತರ ನೆರವಿಗೆ ನಿಂತಿದ್ದ ಗೆಹ್ಲೋಟ್‌ ಕೆಲಸ ಮೆಚ್ಚಿಕೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗೆಹ್ಲೋಟ್‌ ಅವರನ್ನು ರಾಜಕೀಯಕ್ಕೆ ಕರೆತಂದಿದ್ದರು. 1974ರಲ್ಲಿ ಎನ್‌ಎಸ್‌ಯುಐಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಯುವ ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಗೆಹ್ಲೋಟ್‌ ಸರಳ ಜೀವಿ. ಸೀದಾ, ಸಾದಾ ವ್ಯಕ್ತಿತ್ವದಿಂದಾಗಿ ಅವರನ್ನು ‘ರಾಜಸ್ಥಾನದ ಗಾಂಧಿ’ ಎಂದು ಕರೆಯಲಾಗುತ್ತದೆ.

ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರ ಜತೆ ಮುಕ್ತವಾಗಿ ಬೆರೆಯುವ ಗುಣ ಅವರಿಗೆ ವರದಾನವಾಗಿದೆ. ನಾಲ್ಕು ಬಾರಿ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ, ಹಲವು ಬಾರಿ ಲೋಕಸಭೆ ಮತ್ತು ವಿಧಾನಸಭೆ ಸದಸ್ಯರಾಗಿ ರಾಜಕಾರಣದಲ್ಲಿ ಅಪಾರ ಅನುಭವ ಗಳಿಸಿದ್ದಾರೆ.

ಸದ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಗೆಹ್ಲೋಟ್‌ ಪಕ್ಷದ ಸಂಕಷ್ಟ ಸಂದರ್ಭದಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ಅವರು ರೂಪಿಸಿದ್ದ ತಂತ್ರಗಾರಿಕೆಯಿಂದಾಗಿ ಬಿಜೆಪಿ ಗೆಲ್ಲಲು ಏದುಸಿರು ಬಿಡುವಂತಾಗಿತ್ತು.ಕರ್ನಾಟಕದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಲ್ಲಿ ಗುಲಾಂ ನಬಿ ಆಜಾದ್‌ ಜತೆ ಗೆಹ್ಲೋಟ್‌ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT