ನವದೆಹಲಿ (ಪಿಟಿಐ): ರಾಜ್ಯದ 30ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಒಳಪಡುವ ಯಾದಗಿರಿಯಲ್ಲಿ ರೂ 7,500 ಕೋಟಿ ಮೊತ್ತದಲ್ಲಿ ರೈಲ್ವೆ ಬೋಗಿ ಘಟಕ ಆರಂಭಕ್ಕೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ.
ಮಾರ್ಗಗಳ ವಿದ್ಯುದೀಕರಣ, ಮೇಲ್ಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರೂ 70,759 ಕೋಟಿ ಮೊತ್ತದ ರೈಲ್ವೆ ಪೂರಕ ಬೇಡಿಕೆಗಳ ಅಂದಾಜು ಮಂಡಿಸಲಾಗಿದ್ದು, ಇದರಲ್ಲಿ ಯಾದಗಿರಿ ಯೋಜನೆಯ ಪ್ರಸ್ತಾಪವೂ ಸೇರಿದೆ.
ತೆಲಂಗಾಣ ಮತ್ತಿತರ ವಿಷಯಗಳ ಕುರಿತು ವಿವಿಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ 2013–14ರ ಸಾಲಿನ ಸಾಲಿನ ಪೂರಕ ಬೇಡಿಕೆಗಳ ಅನುದಾನಕ್ಕೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.
ಪಶ್ಚಿಮ ಬಂಗಾಳದ ಕಾಟ್ವಾ ಅಜಿಮ್ಗಂಜ್, ನಲ್ಹತಿ ಅಜಿಮ್ಗಂಜ್ ಹಾಗೂ ತಿಲ್ದಂಗ ನವ ಫರಕ್ಕ ಬೈಪಾಸ್ ಮಾರ್ಗಗಳ ವಿದ್ಯುದೀಕರಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್. ಮುನಿಯಪ್ಪ ಕೋಲಾರಕ್ಕೆ ರೈಲ್ವೆ ಬೋಗಿ ಘಟಕ ಮಂಜೂರು ಮಾಡಿದ್ದು, ಇದೀಗ ಯಾದಗಿರಿಗೂ ಈ ಅವಕಾಶ ಸಿಕ್ಕಿದೆ.