ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ಮಂಗಳವಾರ ಲೋಕಪಾಲ ಮಸೂದೆಯ ಚರ್ಚೆ ನಿಗದಿಯಾಗಿದೆ. ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಹುತೇಕ ಸರ್ವಾನುಮತ ರೂಪುಗೊಂಡಿದೆ. ಆದರೆ ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷ (ಎಸ್ಪಿ) ಮಸೂದೆಯನ್ನು ವಿರೋಧಿಸುತ್ತಿದ್ದು, ಅಂಗೀಕಾರಕ್ಕೆ ತೊಡಕಾಗಿ ಕಾಡುವ ಸಾಧ್ಯತೆಯೇ ಹೆಚ್ಚಾಗಿದೆ.
ಕೇಂದ್ರ ಸಚಿವ ಸಿಸ್ರಾಮ್ ಓಲಾ ನಿಧನದಿಂದಾಗಿ ಸೋಮವಾರ ಸದನವನ್ನು ಮುಂದೂಡಲಾಯಿತು. ಹೀಗಾಗಿ ಸೋಮವಾರ ಚರ್ಚೆಗೆ ಬರಬೇಕಿದ್ದ ಮಸೂದೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಾಗುವುದು.
ಮಸೂದೆಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ತುರ್ತಾಗಿ ಕರೆದ ಸರ್ವಪಕ್ಷ ಸಭೆಯನ್ನು ಸಮಾಜವಾದಿ ಪಕ್ಷ ಬಹಿಷ್ಕರಿಸಿತ್ತು. ಲೋಕಪಾಲ ಮಸೂದೆಯಿಂದಾಗಿ ಇಡೀ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಭೀತಿ ಸಮಾಜವಾದಿ ಪಕ್ಷ ಮಸೂದೆಯನ್ನು ವಿರೋಧಿಸುವುದಕ್ಕೆ ಕಾರಣವಾಗಿದೆ.
ಬಿಎಸ್ಪಿ ಮತ್ತು ಡಿಎಂಕೆ ಕೂಡ ಸಭೆಗೆ ಹಾಜರಾಗಿರಲಿಲ್ಲ. ಆದರೆ ಬಿಎಸ್ಪಿ ಮಸೂದೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.
ಸಭೆಗೆ ಹಾಜರಾಗಿದ್ದ ಎಲ್ಲ ಪಕ್ಷಗಳೂ ಮಸೂದೆ ಅಂಗೀಕಾರದ ಬಗ್ಗೆ ಸಹಮತ ಹೊಂದಿದ್ದವು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದರು.
ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವಂತೆ ಮತ್ತು ಸದನದಲ್ಲಿ ಗದ್ದಲ ಉಂಟು ಮಾಡದಂತೆ ಎಲ್ಲ ಪಕ್ಷಗಳೂ ಸಮಾಜವಾದಿ ಪಕ್ಷದ ಮನವೊಲಿಸಲಿವೆ ಎಂದೂ ಕಮಲ್ನಾಥ್ ತಿಳಿಸಿದ್ದಾರೆ.
*ಶಿಷ್ಯನಿಗೆ ಅಣ್ಣಾ ತಿರುಗೇಟು